ಕುಂದಾನಗರಿಯತ್ತ ಪ್ರಧಾನಿ ಪ್ರಯಾಣ : ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮನ ; ಬೃಹತ್ ರೋಡ್ ಶೋ – Vishwanews24
ಕುಂದಾನಗರಿಯತ್ತ ಪ್ರಧಾನಿ ಪ್ರಯಾಣ : ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮನ ; ಬೃಹತ್ ರೋಡ್ ಶೋ
ಬೆಳಗಾವಿ : ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗದಲ್ಲಿ ನೂತನ ಏರ್ ಪೋರ್ಟ್ ಉದ್ಘಾಟಿಸಿ ಇದೀಗ ಬೆಳಗಾವಿ ಸಾಂಬ್ರಾ ಏರ್ ಪೋರ್ಟ್ ಗೆ ಆಗಮಿಸಿದ್ದಾರೆ.
ನಗರದ ಮಾಲಿನಿ ಸಿಟಿ ಮೈದಾನದಲ್ಲಿ ಬೃಹತ್ ಕಾರ್ಯಕ್ರಮ ನಡೆಯಲಿದ್ದು, ಕಿಸಾನ್ ಸಮ್ಮಾನ್ ಯೋಜನೆಯ 13ನೇ ಕಂತಿನ ಹಣವನ್ನು ಮಾನ್ಯ ಪ್ರಧಾನಮಂತ್ರಿಗಳು ನೇರವಾಗಿ ಫಲಾನುಭವಿಗಳ ಖಾತೆಗೆ ನೇರವಾಗಿ ಬಿಡುಗಡೆ/ವರ್ಗಾವಣೆ ಮಾಡಲಿದ್ದಾರೆ.
ದೇಶದ ಒಟ್ಟು 8 ಕೋಟಿ ರೈತರ ಖಾತೆಗೆ ತಲಾ 2 ಸಾವಿರದಂತೆ 16 ಸಾವಿರ ಕೋಟಿ ರೂಪಾಯಿ. ಇದರಲ್ಲಿ ಕರ್ನಾಟಕ ರಾಜ್ಯದ 49.55 ರೈತರಿಗೆ 991 ಕೋಟಿ ರೂಪಾಯಿ ಮತ್ತು ಬೆಳಗಾವಿ ಜಿಲ್ಲೆಯ 5.10 ಲಕ್ಷ ರೈತರ ಖಾತೆಗೆ 102 ಕೋಟಿ ರೂಪಾಯಿಗಳನ್ನು ಪ್ರಧಾನಮಂತ್ರಿಗಳು ವರ್ಗಾವಣೆ ಮಾಡಲಿದ್ದಾರೆ.
ಜನಜೀವನ ಮಿಷನ್ ಯೋಜನೆಯಡಿ ಬೆಳಗಾವಿ ಜಿಲ್ಲೆಗೆ ಸಂಬಂಧಿಸಿದಂತೆ ಒಟ್ಟು 1120 ಕೋಟಿ ರೂಪಾಯಿ ವೆಚ್ಚದ ವಿವಿಧ ತಾಲ್ಲೂಕುಗಳ ಐದು ಬಹುಗ್ರಾಮ ಕುಡಿಯುವ ನೀರು ಯೋಜನೆಗಳ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಪ್ರಧಾನಿಗಳು ಬಟನ್ ಒತ್ತುವ ಮೂಲಕ 8 ಕೋಟಿ ರೈತರಿಗೆ ಕಿಸಾನ್ ಸಮ್ಮಾನ್ ನಿಧಿಯ ಯೋಜನೆಯ ಹಣ ವರ್ಗಾವಣೆ ಮಾಡಲಿದ್ದಾರೆ. ಲೋಂಡಾ- ಬೆಳಗಾವಿ- ಘಟಪ್ರಭಾ ಡಬ್ಲಿಂಗ್ ರೈಲು ಮಾರ್ಗವನ್ನು ಅವರು ದೇಶಕ್ಕೆ ಸಮರ್ಪಣೆ ಮಾಡುವರು. ನವೀಕರಣಗೊಂಡ ಬೆಳಗಾವಿ ರೈಲು ನಿಲ್ದಾಣ ಹಾಗೂ ಜಲಜೀನ್ ಮಿಷನ್ ಅಡಿ ನಡೆದ ಕಾಮಗಾರಿಗಳನ್ನು ಉದ್ಘಾಟಿಸುವರು.
ಬೃಹತ್ ರೋಡ್ ಶೋ:
ಬೆಳಗಾವಿ ನಗರದಲ್ಲಿ ಬೃಹತ್ ರೋಡ್ ಶೋ ನಡೆಸಿದ ಬಳಿಕ ಮಧ್ಯಾಹ್ನ ಮಾಲಿನಿ ಸಿಟಿ ಮೈದಾನದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪ್ರಧಾನ ಮಂತ್ರಿಗಳು ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದು, ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಕೆಎಸ್ಆರ್ಪಿ ಮೈದಾನಕ್ಕೆ ತೆರಳುವರು. ಅಲ್ಲಿಂದ ರಾಣಿ ಚನ್ನಮ್ಮ ವೃತ್ತದವರೆಗೆ ಬಂದ ನಂತರ, ರೋಡ್ ಶೋ ಆರಂಭಿಸಲಿದ್ದಾರೆ.
