ಕೇರಳ ವಿಧಾನಸಭೆಯ ನೂತನ ಸ್ಪೀಕರ್ ಆಗಿ ತಿರುವಾಂಚೂರ್ ರಾಧಾಕೃಷ್ಣನ್ ಆಯ್ಕೆ -vishwanews24

Featured, ರಾಷ್ಟ್ರ ನ್ಯೂಸ್

ಕೇರಳ ವಿಧಾನಸಭೆಯ ನೂತನ ಸ್ಪೀಕರ್ ಆಗಿ ತಿರುವಾಂಚೂರ್ ರಾಧಾಕೃಷ್ಣನ್ ಆಯ್ಕೆ

ತಿರುವನಂತಪುರಂ : ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಎಂಟು ಬಾರಿ ಶಾಸಕರಾಗಿರುವ ತಿರುವಂಚೂರು ರಾಧಾಕೃಷ್ಣನ್ ಅವರು ಶುಕ್ರವಾರ ಕೇರಳದ 16ನೇ ವಿಧಾನಸಭೆಯ ನೂತನ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ.

140 ಸದಸ್ಯರ ವಿಧಾನಸಭೆಯಲ್ಲಿ ಹಂಗಾಮಿ ಸ್ಪೀಕರ್ ಆಗಿದ್ದ ಜಿ. ಸುಧಾಕರನ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರಿಂದ ಮತದಾನದಲ್ಲಿ ಪಾಲ್ಗೊಳ್ಳಲಿಲ್ಲ. ಚಲಾವಣೆಯಾದ 139 ಮತಗಳಲ್ಲಿ ಯುಡಿಎಫ್ ಅಭ್ಯರ್ಥಿಯಾಗಿದ್ದ ರಾಧಾಕೃಷ್ಣನ್ 101 ಮತಗಳನ್ನು ಪಡೆದು ಭರ್ಜರಿ ಗೆಲುವು ಸಾಧಿಸಿದರು.

ಎಲ್‌ಡಿಎಫ್ ಪರ ಕಣಕ್ಕಿಳಿದ ಎ. ಸಿ. ಮೊಯ್ದೀನ್ 35 ಮತಗಳನ್ನು ಪಡೆದರೆ, ಬಿಜೆಪಿಯ ಬಿ. ಬಿ. ಗೋಪಕುಮಾರ್ ಕೇವಲ 3 ಮತಗಳಿಗೆ ಸೀಮಿತರಾದರು. 76 ವರ್ಷದ ತಿರುವಂಚೂರು ರಾಧಾಕೃಷ್ಣನ್ ಅವರು 1991ರಿಂದ ನಿರಂತರವಾಗಿ ವಿಧಾನಸಭೆಯ ಸದಸ್ಯರಾಗಿದ್ದು, 2011ರಿಂದ 2016ರವರೆಗೆ ಉಮ್ಮನ್ ಚಾಂಡಿ ನೇತೃತ್ವದ ಸರ್ಕಾರದಲ್ಲಿ ಗೃಹ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ನಂತರ ಅರಣ್ಯ, ಸಾರಿಗೆ, ಕ್ರೀಡೆ, ಸಿನಿಮಾ ಹಾಗೂ ಪರಿಸರ ಖಾತೆಗಳ ಜವಾಬ್ದಾರಿಯನ್ನೂ ನಿರ್ವಹಿಸಿದ್ದರು. 2026ರ ವಿಧಾನಸಭಾ ಚುನಾವಣೆಯಲ್ಲಿ ಕೊಟ್ಟಾಯಂ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ಸುಮಾರು 36 ಸಾವಿರ ಮತಗಳ ಅಂತರದಿಂದ ಜಯಗಳಿಸಿದ್ದರು. ಚುನಾವಣಾ ಅಫಿಡವಿಟ್ ಪ್ರಕಾರ, ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು 3 ಕೋಟಿ ರೂ. ಆಗಿದ್ದು, 12.8 ಲಕ್ಷ ರೂ. ಸಾಲವಿದೆ. ವಾರ್ಷಿಕ ಆದಾಯ 10.1 ಲಕ್ಷ ರೂ. ಎಂದು ಘೋಷಿಸಿದ್ದಾರೆ.

Leave a Reply