ಕೊರೋನಾದ ತುರ್ತು ಚಿಕಿತ್ಸೆಗೆ ಪುತ್ತಿಗೆ ಮಠ ಹಾಗೂ ಗುರ್ಮೆ ಫೌಂಡೆಷನ್ ವತಿಯಿಂದ 4 ಅಂಬ್ಯುಲೆನ್ಸ್ ಲೋಕಾರ್ಪಣೆ-vishwanews24
ಕಾಪು: ಕರೋನಾ ಸಮಸ್ಯೆಯಿಂದಾಗಿ ಮನುಕುಲ ತತ್ತರಿಸಿ ಹೋಗಿದೆ. ಆಕಸ್ಮಿಕವೋ ಅಥವಾ ವ್ಯವಸ್ಥಿತ ಪಿತೂರಿಯೋ ಅರಿಯದೇ ಭಾರತ ಕರೋನಾದಿಂದ ಮುಕ್ತವಾಗಲು ಹೆಣಗಾಡುತ್ತಿದೆ ಎಂದು ಪುತ್ತಿಗೆ ಮಠಾಧೀಶ ಶ್ರೀ ಶ್ರೀ ಸುಗುಣೇಂದ್ರತೀರ್ಥರು ಹೇಳಿದರು.
ಗುರುವಾರ ಕಾಪುವಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುರ್ಮೆ ಫೌಂಡೇಶನ್ ಮತ್ತು ಪುತ್ತಿಗೆ ಮಠದ ವತಿಯಿಂದ ಕೊರೋನಾ ತುರ್ತು ಚಿಕಿತ್ಸೆಗೆ ನೀಡಲಾದ ಆ್ಯಂಬುಲೆನ್ಸ್ ಹಸ್ತಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇಂತಹ ಕಠಿಣ ಸಮಯದಲ್ಲಿ ಉಳ್ಳವರು ಸೇವೆ ನೀಡಬೇಕು. ನಾವೆಲ್ಲರೂ ಒಟ್ಟಾಗಿ ಸೇವೆ ಮಾಡೋಣ ಎಂದು ಕರೆ ನೀಡಿದರು.
ಪ್ರಸ್ತಾವಿಕ ಮಾತನಾಡಿದ ಗುರ್ಮೆ ಫೌಂಡೇಶನ್ ನ ಪ್ರವರ್ತಕರಾದ ಸುರೇಶ್ ಶೆಟ್ಟಿ ಗುರ್ಮೆಯವರು ವೃಕ್ಷಕ್ಕಲ್ಲ ವೃಕ್ಷದ ಫಲವು,ನದಿಯ ನೀರು ನದಿಗಲ್ಲ ,ಸಂತನ ಬದುಕು ಸಂತನಿಗಲ್ಲ ಅದು ಲೋಕದ ಹಿತಕೆ – ಕಬೀರಾ ಎಂಬ ಮಾತಿದೆ ಇದರಂತೆ ನನ್ನ ತಾಯಿಯ ಹೆಸರಿನಲ್ಲಿ ಗುರ್ಮೆ ಫೌಂಡೇಶನ್ ಅನ್ನು ಸ್ಥಾಪಿಸಿ ದೇವರು ಕೊಟ್ಟದರಲ್ಲಿ ಒಂದು ಭಾಗವನ್ನು ಸಮಾಜಕ್ಕಾಗಿ ಮೀಸಲಿಡುತ್ತಾ ಬಂದಿದ್ದೇನೆ. ಕರೋನಾ ಸಂದರ್ಭದಲ್ಲಿ ಆ್ಯಂಬುಲೆನ್ಸ್ ಗಳ ಕೊರತೆ ಇದ್ದು, ಪ್ರಧಾನಿ ಮೋದಿಯವರು ಟ್ಯಾಕ್ಸಿಗಳನ್ನು ಆ್ಯಂಬುಲೆನ್ಸ್ ಆಗಿ ಪರಿವರ್ತಿಸಲು ಕರೆ ನೀಡಿದ್ದಾರೆ. ಅವರ ಕರೆಯನ್ನು ಸ್ವೀಕರಿಸಿ ಗುರ್ಮೆ ಫೌಂಡೇಶನ್ ಎರಡು ಆ್ಯಂಬುಲೆನ್ಸ್ ಹಾಗೂ ಪುತ್ತಿಗೆ ಮಠದ ವತಿಯಿಂದ ಎರಡು ಆ್ಯಂಬುಲೆನ್ಸ್ ಜಿಲ್ಲೆಯಾದ್ಯಂತ ಸಂಚರಿಸಲಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಹಿಂದುಳಿದ ಮೋರ್ಚಾ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಸುವರ್ಣ, ಶಾಸಕ ಲಾಲಾಜಿ ಮೆಂಡನ್,ಕಿದಿಯೂರು ಉದಯ್ ಕುಮಾರ್ ಶೆಟ್ಟಿ, ಕಾಪು ವೈಧ್ಯಾಧಿಕಾರಿ ಸುಬ್ರಾಯ ಕಾಮತ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಜಿ.ಪಂ ಅಧ್ಯಕ್ಷ ದಿನಕರ್ ಬಾಬು, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗಿಶ್ ಶೆಟ್ಟಿ, ಕೆ.ಎಂ.ಎಫ್ ಬೆಂಗಳೂರು ನಿರ್ದೇಶಕ ದಿವಾಕರ್ ಶೆಟ್ಟಿ, ಬೆಳಪು ದೇವಿಪ್ರಸಾದ್ ಶೆಟ್ಟಿ, ಪುರಸಭೆ ಅಧ್ಯಕ್ಷ ಅನಿಲ್ ಕುಮಾರ್, ಮುಖ್ಯಾಧಿಕಾರಿ ವೆಂಕಟೇಶ್ ನಾವಡ, ಪುರಸಭೆ ಸದಸ್ಯ ಅರುಣ್ ಶೆಟ್ಟಿ ಪಾದೂರು, ಉದ್ಯಮಿ ಸಂದೀಪ್ ಶೆಟ್ಟಿ ಕನ್ಯಾನ ಗುತ್ತು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ವರದಿ: ಪುರುಷೋತ್ತಮ ಸಾಲಿಯಾನ್ -ವಿಶ್ವನ್ಯೂಸ್24 ಕಾಪು



