ಕೋವಿಡ್-19ರ ಅಲೆಯನ್ನು ತಗ್ಗಿಸುವಲ್ಲಿ ಜನರ ಸಹಕಾರದೊಂದಿಗೆ ಶ್ರಮಿಸಿ ಸರ್ಕಾರ ಯಶಸ್ವಿಯಾಗಿದೆ : ರಾಜ್ಯಪಾಲ ವಜುಭಾಯಿ ವಾಲಾ -Vishwanews24
ಕೋವಿಡ್-19ರ ಅಲೆಯನ್ನು ತಗ್ಗಿಸುವಲ್ಲಿ ಜನರ ಸಹಕಾರದೊಂದಿಗೆ ಶ್ರಮಿಸಿ ಸರ್ಕಾರ ಯಶಸ್ವಿಯಾಗಿದೆ : ರಾಜ್ಯಪಾಲ ವಜುಭಾಯಿ ವಾಲಾ -Vishwanews24
ಬೆಂಗಳೂರು: ‘ಕೋವಿಡ್-19ರ ಅಲೆಯನ್ನು ತಗ್ಗಿಸುವಲ್ಲಿ ಜನರ ಸಹಕಾರದೊಂದಿಗೆ ಹಗಲಿರುಳು ಶ್ರಮಿಸಿ. ಕರ್ನಾಟಕ ಸರ್ಕಾರ ಯಶಸ್ವಿಯಾಗಿದೆ’ ಎಂದು ರಾಜ್ಯಪಾಲ ವಜುಭಾಯಿ ವಾಲಾ ಹೇಳಿದರು.
ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಮಂಗಳವಾರ ನಡೆದ 72 ನೇ ಗಣರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕೋವಿಡ್ ಬಿಕ್ಕಟ್ಟಿನ ಅವಕಾಶವನ್ನು ನಮ್ಮ ಸಾಮರ್ಥ್ಯ ವೃದ್ಧಿಸಲು ಮತ್ತು ಆರೋಗ್ಯ ಮೂಲಸೌಕರ್ಯ ಹಾಗೂ ಪಿ.ಪಿ.ಇ. ಕಿಟ್, ವೆಂಟಿಲೇಟರ್ ಉತ್ಪಾದನೆ ಹೆಚ್ಚಿಸಲು ಬಳಸಿಕೊಂಡಿದ್ದೇವೆ. ಇದು ಪ್ರಧಾನಿ ನರೇಂದ್ರ ಮೋದಿಯವರು ದೂರದರ್ಶಿತ್ವ ‘ಆತ್ಮ ನಿರ್ಭರ್ ಭಾರತ್’ ಕಾರ್ಯಕ್ರಮದ ದಿಸೆಯಲ್ಲಿ ಉತ್ತಮ ಹೆಜ್ಜೆ’ ಎಂದು ಬಣ್ಣಿಸಿದರು.
‘ಎಂದಿಗೂ ಮಣಿಯದ ಮಾನವ ಚೈತನ್ಯ ಶಕ್ತಿಗೆ ಈ ಗಣರಾಜ್ಯೋತ್ಸವದ ಸಮಾರಂಭವನ್ನು ಅರ್ಪಿಸುತ್ತೇನೆ. ಇದೊಂದು ಶತ್ರುವಿನ ವಿರುದ್ಧ ಪಡೆದ ಜಯವಾಗಿದೆ. 2020ರಲ್ಲಿ ಹಿಂದೆಂದೂ ಕಂಡರಿಯದ ಕೋವಿಡ್-19ರ ಸವಾಲನ್ನು ಜಗತ್ತು ಎದುರಿಸುತ್ತಿರುವಾಗ, ನಾವು ನವ ಚೈತನ್ಯ ಮತ್ತು ಆಶೋತ್ತರದೊಂದಿಗೆ ಹೊಸ ವರ್ಷ 2021ಕ್ಕೆ ಹೆಜ್ಜೆ ಇರಿಸಿದ್ದೇವೆ’ ಎಂದೂ ವಾಲಾ ಹೇಳಿದರು.
ಇದನ್ನೂ ಓದಿ : ತೀವ್ರಗೊಂಡ ರೈತರ ಪ್ರತಿಭಟನೆ : ಪೊಲೀಸರಿಂದ ರೈತರ ಮೇಲೆ ಲಾಠಿಚಾರ್ಜ್, ಅಶ್ರುವಾಯು ಪ್ರಯೋಗ -Vishwanews24
ಸಾಂಪ್ರದಾಯಿಕ ಗುಜರಾತಿ ಪೇಟಾ ಧರಿಸಿ, ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಬಂದಿದ್ದ ವಾಲಾ ರಾಜ್ಯದ ಜನರಿಗೆ ಗಣರಾಜ್ಯೋತ್ಸವದ ಶುಭಾಶಯ ಕೋರಿದರು. ಸುಮಾರು 40 ನಿಮಿಷಗಳಲ್ಲಿ ಮುಕ್ತಾಯವಾದ ಕಾರ್ಯಕ್ರಮದಲ್ಲಿ 12 ಪುಟಗಳ ಭಾಷಣವನ್ನು ರಾಜ್ಯಪಾಲರು ಓದಿದರು. ತಮ್ಮ ಭಾಷಣದಲ್ಲಿ ಸರ್ಕಾರದ ಕಾರ್ಯಕ್ರಮಗಳು, ಯೋಜನೆಗಳನ್ನು ಹೊಗಳುವ ಮೂಲಕ ಸರ್ಕಾರದ ಬೆನ್ನು ತಟ್ಟಿದರು.
‘ಕೋವಿಡ್ ಕೊನೆಯ ಹಂತಕ್ಕೆ ತಲುಪಿದ್ದೇವೆ. ಹಾಗೆಂದು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ದೈಹಿಕ ಅಂತರ, ಮಾಸ್ಕ್ ಧರಿಸುವುದು, ಸ್ಯಾನಿಟೈಸ್ ಬಳಕೆ ಕಡ್ಡಾಯ’ ಎಂದೂ ಅವರು ಸಲಹೆ ನೀಡಿದರು.
ಮಾಣಿಕ್ ಷಾ ಪರೇಡ್ ಮೈದಾನಕ್ಕೆ ಬಂದ ರಾಜ್ಯಪಾಲರನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ವಾಗತಿಸಿದರು. ನಂತರ ರಾಜ್ಯಪಾಲರು ಧ್ವಜಾರೋಹಣ ನೆರವೇರಿಸಿದರು.
ಇದನ್ನೂ ಓದಿ : ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದ ಜೆಸಿ ಮಾಧುಸ್ವಾಮಿ -Vishwanews24
