ಚಿಕ್ಕಮಗಳೂರು ಬಿಜೆಪಿ ಕಚೇರಿಯಲ್ಲಿ ಮತ್ತೆ ‘ಗೋ ಬ್ಯಾಕ್ ಶೋಭಾ’ ಘೋಷಣೆ ; ಕಾರ್ಯಕರ್ತರ ಅಸಮಾಧಾನ – Vishwanews24
ಚಿಕ್ಕಮಗಳೂರು ಬಿಜೆಪಿ ಕಚೇರಿಯಲ್ಲಿ ಮತ್ತೆ ‘ಗೋ ಬ್ಯಾಕ್ ಶೋಭಾ’ ಘೋಷಣೆ ; ಕಾರ್ಯಕರ್ತರ ಅಸಮಾಧಾನ
ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡಬಾರದು ಎಂದು ಆಗ್ರಹಿಸಿ ಧರಣಿ
ಚಿಕ್ಕಮಗಳೂರು,: ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ನಡೆಯುತ್ತಿದ್ದ ʼಗೋ ಬ್ಯಾಕ್ʼ ಅಭಿಯಾನ ಸದ್ಯ ತೀವ್ರ ಸ್ವರೂಪ ಪಡೆದುಕೊಂಡಿದೆ. ಹಾಲಿ ಸಂಸದೆ ವಿರುದ್ಧ ಬಿಜೆಪಿ ಮುಖಂಡರು, ಕಾರ್ಯಕರ್ತರ ಅಸಮಾಧಾನ ರವಿವಾರ ಪಕ್ಷದ ಕಚೇರಿಯಲ್ಲೇ ಸ್ಪೋಟಗೊಂಡಿದ್ದು, ಪಕ್ಷದ ವರಿಷ್ಠರ ಸಮ್ಮುಖದಲ್ಲೇ ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡಬಾರದು ಎಂದು ಆಗ್ರಹಿಸಿ ಧರಣಿ ; ನಡೆಯಿತು.
ಬಿಜೆಪಿ ಪಕ್ಷದ ಕಚೇರಿಯಲ್ಲಿ ರವಿವಾರ ಪರಿಶಿಷ್ಟ ಪಂಗಡಗಳ ಮುನ್ನಡೆ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಬಿಜೆಪಿ ಪರಿಶಿಷ್ಟ ಪಂಗಡ ಮೋರ್ಚಾದ ರಾಜ್ಯಾಧ್ಯಕ್ಷ ಬಂಗಾರು ಹನುಮಂತು, ಮಾಜಿ ಸಚಿವ ಆರಗ ಜ್ಞಾನೇಂದ್ರ, ಚುನಾವಣಾ ಉಸ್ತುವಾರಿ ಭಾನುಪ್ರಕಾಶ್, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್ ಶೆಟ್ಟಿ, ಸಿ.ಟಿ.ರವಿ, ಮತ್ತಿತರ ನಾಯಕರು ಭಾಗವಹಿಸಿದ್ದರು. ನೂರಾರು ಕಾರ್ಯಕರ್ತರು ಪಕ್ಷದ ವರಿಷ್ಠರು ಮಾತು ಆರಂಭಿಸುತ್ತಿದ್ದಂತೆ ʼಗೋ ಬ್ಯಾಕ್ʼ ಶೋಭಾ ಘೋಷಣೆ ಕೂಗಿ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ನೀಡಬಾರದು, ಮಾಜಿ ಶಾಸಕ ಸಿ.ಟಿ.ರವಿ ಅವರಿಗೆ ಈ ಬಾರಿಯ ಲೋಕಸಭೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದರು.
ಕುವೈಟ್ನಲ್ಲಿ ಹೃದಯಾಘಾತ – ಮಗಳ ಮದುವೆ ತಯಾರಿಯಲ್ಲಿದ್ದ ಕೋಟದ ವ್ಯಕ್ತಿ ನಿಧನ – Vishwanews24
ಪಕ್ಷದ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ಸಿ.ಟಿ.ರವಿ ಸೇರಿದಂತೆ ಹಲವು ಮುಖಂಡರು, ಘೋಷಣೆ ಕೂಗುತ್ತಿದ್ದ ಕಾರ್ಯಕರ್ತರನ್ನು ಸಮಾಧಾನ ಮಾಡಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಈ ವೇಳೆ ಸಭೆಯಲ್ಲಿ ಗೊಂದಲ ಏರ್ಪಟ್ಟಿದ್ದಲ್ಲದೇ ಕಾರ್ಯಕರ್ತರು ಮತ್ತು ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಬಿಜೆಪಿ ಪಕ್ಷದ ಕಚೇರಿ ಎದುರು ಆಗಮಿಸಿದ ಕಾರ್ಯಕರ್ತರು ಧರಣಿ ನಡೆಸಿ, ಶೋಭಾ ವಿರುದ್ಧ ಘೋಷಣೆ ಕೂಗಿ, ʼಗೋ ಬ್ಯಾಕ್ ಶೋಭಾʼ, ʼಗೋ ಬ್ಯಾಕ್ ಶೋಭಾʼ ಘೋಷಣೆ ಮೊಳಗಿಸಿದರು.
ಈ ವೇಳೆ ಮಾತನಾಡಿದ ಕಾರ್ಯಕರ್ತರು, “ಶೋಭಾ ಕರಂದ್ಲಾಜೆ ಅವರನ್ನು ಎರಡು ಬಾರಿ ಗೆಲ್ಲಿಸಿದ್ದೇವೆ. ಗೆದ್ದ ಬಳಿಕ ಕಾರ್ಯಕರ್ತರ ಕೈಗೆ ಸಿಗುವುದಿಲ್ಲ, ಕಾರ್ಯಕರ್ತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಜಿಲ್ಲೆಯ 5 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಶೋಭಾ ಕರಂದ್ಲಾಜೆ ಅವರೇ ಕಾರಣ. ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳ ಪರ ಪ್ರಚಾರಕ್ಕೂ ಅವರು ಬಂದಿಲ್ಲ. ಅವರಿಗೆ ಟಿಕೆಟ್ ನೀಡಿದಲ್ಲಿ ಸೋಲು ಖಚಿತ, ಅವರ ವಿರುದ್ಧ ಜಿಲ್ಲಾ ಮುಖಂಡರು, ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ. ಚುನಾವಣಾ ಪ್ರಚಾರದಲ್ಲೂ ಕಾರ್ಯಕರ್ತರು ಪಾಲ್ಗೊಳ್ಳುವುದಿಲ್ಲ. ಶೋಭಾ ಹೊರತು ಯಾರಿಗಾದರೂ ಟಿಕೆಟ್ ನೀಡಬೇಕು, ಪಕ್ಷದ ಸಂಘಟನೆಗೆ ಹಗಲಿರುಳು ಶ್ರಮಿಸುತ್ತಿರುವ ಸಿ.ಟಿ.ರವಿ ಅವರಿಗೇ ಟಿಕೆಟ್ ನೀಡಬೇಕು” ಎಂದು ಪಕ್ಷದ ವರಿಷ್ಠರಲ್ಲಿ ಕಾರ್ಯಕರ್ತರು ಒತ್ತಾಯಿಸಿದರು.
“ಯಡಿಯೂರಪ್ಪ ಅವರು ಹಾದಿ ಬೀದಿಯಲ್ಲಿ ಶೋಭಾ ಅವರಿಗೆ ಟಿಕೆಟ್ ಎಂದು ಘೋಷಣೆ ಮಾಡಿದ್ದಾರೆ. ಹೈಕಮಾಂಡ್ ಅಧಿಕೃತ ಅಭ್ಯರ್ಥಿಯನ್ನು ಘೋಷಣೆ ಮಾಡುವುದಕ್ಕೂ ಮುನ್ನ ಶೋಭಾ ಅವರೇ ಅಭ್ಯರ್ಥಿ ಎಂದು ಯಡಿಯೂರಪ್ಪ ಹೇಳಿಕೆ ನೀಡಿರುವುದು ಎಷ್ಟು ಸರಿ?” ಎಂದು ಕಾರ್ಯಕರ್ತರು ಅಸಮಾಧಾನ ಹೊರ ಹಾಕಿದರು.
ಅಯೋಧ್ಯೆಯಲ್ಲಿ ಹೃದಯಾಘಾತ – ಉಡುಪಿಯ ಪಾಂಡುರಂಗ ಶಾನುಭೋಗ್ ನಿಧನ – Vishwanews24
