ಜನತಾ ಕರ್ಫ್ಯೂ : ಕರವಾಳಿಯಲ್ಲಿ ಭಾರೀ ಬೆಂಬಲ -Vishwanews24

Featured, ಉಡುಪಿ, ದಕ್ಷಿಣ ಕನ್ನಡ

ಮಂಗಳೂರು: ಮಾರಣಾಂತಿಕ ಕೊರೊನಾ ವೈರಸ್‌ ಹರಡುವುದನ್ನು ತಡೆಗಟ್ಟಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕರೆ ನೀಡಿರುವ ‘ಜನತಾ ಕರ್ಫ್ಯೂ’ಗೆ ಕರವಾಳಿಯಲ್ಲಿ ಭಾರೀ ಬೆಂಬಲ ಸಿಕ್ಕಿದೆ.

“ಜನತಾ ಕರ್ಫ್ಯೂ’ ಆಚರಿಸುವಂತೆ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಕರೆಗೆ ದ.ಕ., ಉಡುಪಿ ಮತ್ತು ಕೊಡುಗು ಜಿಲ್ಲೆಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಹೀಗಾಗಿ, ರವಿವಾರ ದ.ಕ. ಜಿಲ್ಲೆಯಾದ್ಯಂತ ಅಘೋಷಿತ ಬಂದ್‌ ವಾತಾವರಣ ನಿರ್ಮಾಣವಾಗಲಿದೆ.

ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ರವಿವಾರ ಮಂಗಳೂರು ಮತ್ತು ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಯಾವುದೇ ರೀತಿಯ ಮೀನುಗಾರಿಕಾ ವ್ಯವಹಾರ ನಡೆಯುವುದಿಲ್ಲ ಎಂದು ಮೀನುಗಾರ ಮುಖಂಡರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಹಾಗೂ ಆಟೋರಿಕ್ಷಾ ಸಂಚಾರ ನಿರ್ಧಾರದ ಬಗ್ಗೆ ಶನಿವಾರ ತೀರ್ಮಾನವಾಗಲಿದೆ. ಹಾಲು ಸೇರಿದಂತೆ ನಿತ್ಯ ಬಳಕೆಯ ವಸ್ತುಗಳು ಎಂದಿನಂತೆ ಸಿಗಲಿವೆ ಎಂದು ಮೂಲಗಳು ತಿಳಿಸಿವೆ.

ಜಗತ್ತಿನಾದ್ಯಂತ ಭೀತಿ ಹುಟ್ಟಿಸಿರುವ ಕೋವಿಡ್‌ 19 ವೈರಸ್‌ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ರವಿವಾರ ಒಂದು ದಿನದ ಜನತಾ ಕರ್ಫ್ಯೂನಲ್ಲಿ ಸರ್ವರೂ ಕೈಜೋಡಿಸಬೇಕು. ಅಂದು ಒಂದು ದಿನ ಮನೆಯಲ್ಲೇ ಉಳಿದುಕೊಳ್ಳುವಂತೆ ಶಾಸಕರಾದ ವೇದವ್ಯಾಸ ಕಾಮತ್‌ ಮತ್ತು ಕೆ.ರಘುಪತಿ ಭಟ್‌ ಮನವಿ ಮಾಡಿದ್ದಾರೆ.