ಜಾಗೃತ ಮತದಾರರಿಂದ ಬಿಜೆಪಿಗೆ ಬೆಂಬಲ : ಕೋಟ ಶ್ರೀನಿವಾಸ ಪೂಜಾರಿ

Featured, ಉಡುಪಿ

ಕಾಪು: ಕೇಂದ್ರದ ಅನುದಾನವನ್ನು ಬಳಸಿಕೊಂಡು ನಡೆಸುವ ಎಲ್ಲಾ ಕಾರ್ಯಕ್ರಮ ಗಳನ್ನೂ ರಾಜ್ಯ ಸರಕಾರ ಮತ್ತು ಹಾಲಿ ಶಾಸಕರು ಕಾಂಗ್ರೆಸ್‌ ಸರಕಾರದ್ದೇ ಸಾಧನೆ ಎಂಬಂತೆ ಬಿಂಬಿಸುತ್ತಿದ್ದಾರೆ. ಪ್ರತೀ ಯೋಜನೆ ಗಳಲ್ಲೂ ಕೇಂದ್ರದ ಬಹುಪಾಲು ಇದೆ ಎನ್ನುವುದನ್ನು ಅರ್ಥೈಸಿಕೊಂಡಿರುವ ಜಾಗೃತ ಮತದಾರರು ಎಲ್ಲಾ ಕಡೆಯಲ್ಲೂ ಕೂಡಾ ಬಿಜೆಪಿಗೆ ಬಹುಪರಾಕ್‌ ಎನ್ನುತ್ತಿದ್ದಾರೆ ಎಂದು ವಿಧಾನಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಕಾಪು ಕ್ಷೇತ್ರದ ಬಿಜೆಪಿ ಅಭ್ಯರ್ಥಿ / ಮಾಜಿ ಶಾಸಕ ಲಾಲಾಜಿ ಆರ್‌. ಮೆಂಡನ್‌ ಅವರ ಪರವಾಗಿ ಕಾಪು ಪೇಟೆಯಲ್ಲಿ ಶುಕ್ರವಾರ ಮತ ಯಾಚನೆ ನಡೆಸಿ ಅವರು ಮಾತನಾಡಿದರು.ಕರಾವಳಿ ಜಿಲ್ಲೆಗಳು ಮತ್ತು ರಾಜ್ಯದಲ್ಲಿ ಬಿಜೆಪಿಯ ಗೆಲುವನ್ನು ತಡೆಯಲು ಯಾರಿದಂಲೂ ಸಾಧ್ಯವಿಲ್ಲ. ಕಳೆದ ವಿಧಾನ ಸಭೆಯ ಬಳಿಕದ ಪ್ರತೀ ಚುನಾವಣೆಯಲ್ಲೂ ನಾವು ನಮ್ಮ ಮತಗಳನ್ನು ಏರಿಸಿಕೊಂಡು ಹೋಗಿದ್ದೇವೆ. ಅಷ್ಟು ಗೊತ್ತಿದ್ದರೂ ಮತ್ತೆ ಮತ್ತೆ ನಾವೇ ಗೆಲ್ಲುವುದು ಎಂದು ಬೀಗುತ್ತಿರುವ ಕಾಂಗ್ರೆಸ್‌ ಪಕ್ಷ ಮೇ 15ರ ನಂತರ ತನ್ನ ದುರಾಡಳಿತವನ್ನು ನೆನೆ ನೆನೆದು ಪಶ್ಚಾತ್ತಾಪ ಪಡಲಿದೆ ಎಂದರು.

ಮತದಾರರ ಬೆಂಬಲ ನಮಗೆ ಸ್ಪೂರ್ತಿ : ಲಾಲಾಜಿ ಮೆಂಡನ್‌
ಕಾಪು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಲಾಲಾಜಿ ಆರ್‌. ಮೆಂಡನ್‌ ಮಾತನಾಡಿ, ಈ ಬಾರಿ ಬಿಜೆಪಿ ಎಂಬ ಘೋಷಣೆಯೊಂದಿಗೆ ನಾವು ಚುನಾವಣೆಯನ್ನು ಎದುರಿಸುತ್ತಿದ್ದು, ಕ್ಷೇತ್ರದ ಎಲ್ಲಾ ಕಡೆಗಳಲ್ಲೂ ಬಿಜೆಪಿಗೆ ಉತ್ತಮ ಜನಬೆಂಬಲ ವ್ಯಕ್ತವಾಗುತ್ತಿದೆ. ನಮ್ಮ ಜೊತೆಗೆ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಮಾತ್ರವಲ್ಲದೇ ಮತದಾರರು ಕೂಡಾ ಮತಯಾಚನೆಗೆ ಬರುತ್ತಿರುವುದು ನಮಗೆ ವಿಶೇಷ ಸ್ಪೂರ್ತಿಯನ್ನು ನೀಡುತ್ತಿದೆ ಎಂದರು.

ಜನಾಭಿಪ್ರಾಯಕ್ಕೆ ವಿರುದ್ಧವಾದ ಆಡಳಿತ ಪ್ರಚಾರ ಸಮಿತಿ ಅಧ್ಯಕ್ಷ ಗುರ್ಮೆ ಸುರೇಶ್‌ ಶೆಟ್ಟಿ ಮಾತನಾಡಿ, ಕೇಂದ್ರದ ನರೇಂದ್ರ ಮೋದಿ ಸರಕಾರದ ಸಾಧನೆ ಮತ್ತು ಜನಪ್ರಿಯತೆಗೆ ಭಾರೀ ಜನಬೆಂಬಲ ವ್ಯಕ್ತವಾಗುತ್ತಿದ್ದು, ಇದರ ನಡುವೆ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರಕಾರದ ಸಾಧನೆ ಸಂಪೂರ್ಣ ಗೌಣವಾಗಿದೆ. ಎಲ್ಲವನ್ನೂ ನಾವೇ ಮಾಡಿದ್ದು ಎಂದು ಹೇಳುವ ಕಾಪು ಶಾಸಕರು ಹಿಂದಿನ ಶಾಸಕರುಗಳು ಹಾಕಿಕೊಟ್ಟಿದ್ದ ಅಭಿವೃದ್ಧಿಯ ಅಡಿಪಾಯದ ಬಗ್ಗೆ ಎಲ್ಲೂ ಹೇಳುತ್ತಿಲ್ಲ. ಅವರ ಆಡಳಿತ ವೈಖರಿ ಸಂಪೂರ್ಣ ಜನಾಭಿಪ್ರಾಯಕ್ಕೆ ವಿರುದ್ಧವಾಗಿ ನಡೆಯುತ್ತಿದೆ ಎಂದರು.

ಉಡುಪಿ ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ಎರ್ಮಾಳ್‌, ಜಿ.ಪಂ. ಸದಸ್ಯೆ ಗೀತಾಂಜಲಿ ಸುವರ್ಣ, ಪುರಸಭೆ ವಿಪಕ್ಷ ನಾಯಕ ಅರುಣ್‌ ಶೆಟ್ಟಿ ಪಾದೂರು, ಬಿಜೆಪಿ ಮುಖಂಡರಾದ ವಿಜಯ ಕರ್ಕೇರ, ವಿಜಯ್‌ ಕುಮಾರ್‌ ಉದ್ಯಾವರ, ಅನಿಲ್‌ ಕುಮಾರ್‌, ಕೇಸರಿ ಯುವರಾಜ್‌, ಪ್ರವೀಣ್‌ ಕುಮಾರ್‌, ಸತೀಶ್‌ ಉದ್ಯಾವರ, ಕಿರಣ್‌ ಆಳ್ವ, ರಮೇಶ್‌ ಶೆಟ್ಟಿ, ಪ್ರದೀಪ್‌ ಯು., ಸುಧಾಮ ಶೆಟ್ಟಿ, ರತ್ನಾಕರ ಶೆಟ್ಟಿ, ಸುಮಾ ಯು. ಶೆಟ್ಟಿ, ಸಂದೀಪ್‌ ಶೆಟ್ಟಿ, ಪವಿತ್ರಾ ಶೆಟ್ಟಿ, ಮಾಲಿನಿ ಶೆಟ್ಟಿ, ಸಶಿಪ್ರಬಾ ಶೆಟ್ಟಿ, ರಮಾ ಶೆಟ್ಟಿ, ಸುರೇಂದ್ರ ಪಣಿಯೂರು, ನವೀನ್‌ ಎಸ್‌.ಕೆ. ಮೊದಲಾದವರು ಉಪಸ್ಥಿತರಿದ್ದರು.