ಜುಲೈ.1ರಿಂದ ಪ್ರಾಥಮಿಕ, ಪ್ರೌಢ ಶಾಲೆಗಳು ಆರಂಭ : ನಾಳೆಯಿಂದ ಕೆಲಸಕ್ಕೆ ಹಾಜರಾಗುವಂತೆ ಶಿಕ್ಷಕರಿಗೆ ‘ಸಾರ್ವಜನಿಕ ಶಿಕ್ಷಣ ಇಲಾಖೆ’ ಆದೇಶ -Vishwanews24

Featured, ರಾಜ್ಯ ನ್ಯೂಸ್

ಜುಲೈ.1ರಿಂದ ಪ್ರಾಥಮಿಕ, ಪ್ರೌಢ ಶಾಲೆಗಳು ಆರಂಭ : ನಾಳೆಯಿಂದ ಕೆಲಸಕ್ಕೆ ಹಾಜರಾಗುವಂತೆ ಶಿಕ್ಷಕರಿಗೆ ‘ಸಾರ್ವಜನಿಕ ಶಿಕ್ಷಣ ಇಲಾಖೆ’ ಆದೇಶ -Vishwanews24

ಬೆಂಗಳೂರು : ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಲ್ಲಿರುವಂತ ಜಿಲ್ಲೆಗಳು ಹೊರತಾಗಿ, ಉಳಿದ ಜಿಲ್ಲೆಗಳ ಶಿಕ್ಷಕರು ಜುಲೈ 1ರಿಂದ ಪ್ರಾಥಮಿಕ, ಪ್ರೌಢ ಶಾಲೆಗಳು ಆರಂಭಗೊಳ್ಳುತ್ತಿರುವ ಹಿನ್ನಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ, ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶಿಸಿದೆ.

ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ರಾಜ್ಯದ ಎಲ್ಲಾ ಉಪನಿರ್ದೇಶಕರು(ಆಡಳಿತ ) ಇವರಿಗೆ ಪರಿಷ್ಕೃತ ಸುತ್ತೋಲೆ ಹೊರಡಿಸಿದ್ದು, ರಾಜ್ಯದಲ್ಲಿ ದಿನಾಂಕ 01-07-2021 ರಿಂದ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳನ್ನು ಪ್ರಾರಂಭಿಸಲು ಹಾಗೂ ಮಕ್ಕಳ ಕಲಿಕೆಗೆ ಪೂರ್ವ ತಯಾರಿಯನ್ನು ಶಿಕ್ಷಕರು ದಿನಾಂಕ 15-06-2021ರಿಂದ ಪ್ರಾರಂಭಿಸಲು ಈಗಾಗಲೇ ತಿಳಿಸಲಾಗಿದೆ.

ಕೋವಿಡ್-19ರ ಹಿನ್ನಲೆಯಲ್ಲಿ ವಿಧಿಸಲಾಗಿರುವ ಕಠಿಣ ನಿರ್ಬಂಧಗಳನ್ನು ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಮೈಸೂರು, ಚಾಮರಾಜನಗರ, ಹಾಸನ, ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಚಿಕ್ಕೋಡಿ(ಶೈಕ್ಷಣಿಕ ಜಿಲ್ಲೆ) ಮಂಡ್ಯ ಮತ್ತು ಕೊಡಗು ಜಿಲ್ಲೆಗಳಲ್ಲಿ ಮುಂದುವರೆಸಲಾಗಿದ್ದು, ಸದರಿ ಜಿಲ್ಲೆಗಳ ಎಲ್ಲಾ ಶಿಕ್ಷಕರು ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಿಕೊಳ್ಳುವ ಮತ್ತು ಪ್ರಸ್ತುತ ಸಾಲಿನ ಶೈಕ್ಷಣಿಕ ವರ್ಷದ ಪೂರ್ವ ತಯಾರಿ ಕಾರ್ಯಗಳನ್ನು ಮಾಡಿಕೊಳ್ಳಲು ತಮ್ಮ ಮನೆಗಳಿಂದ ಕಾರ್ಯನಿರ್ವಹಿಸಲು ಕೋರಿದೆ. ಕಠಿಣ ನಿರ್ಬಂಧಗಳನ್ನು ಭಾಗಶಹ ತೆರವುಗೊಳಿಸಿದ ತಕ್ಷಣವೇ ಶಿಕ್ಷಕರು ಶಾಲೆಗಳಿಗೆ ತೆರಳಿ, ತೊಡಗಿಸಿಕೊಳ್ಳತಕ್ಕದ್ದು.

ಸದರಿ ಜಿಲ್ಲೆಗಳನ್ನು ಹೊರತುಪಡಿಸಿ, ಉಳಿದ ಜಿಲ್ಲೆಗಳಲ್ಲಿನ ಎಲ್ಲಾ ಶಾಲಾ ಶಿಕ್ಷಕರು ದಿನಾಂಕ 15-06-2021ರಿಂದ ಕಾರ್ಯಪ್ರವೃತ್ತರಾಗಲು ಕೋರಿದೆ. ಈ ಎಲ್ಲಾ ಅಂಶಗಳ ಕುರಿತು ಅನುಪಾಲನೆ ಮಾಡಲು ಎಲ್ಲಾ ಉಪ ನಿರ್ದೇಶಕರು(ಆಡಳಿತ) ಮತ್ತು (ಅಭಿವೃದ್ಧಿ)ರವರಿಗೆ ಸೂಚಿಸಿದ್ದಾರೆ.