ಡೇವಿಡ್ ಡಿಸೋಜ ಹತ್ಯೆ ಪ್ರಕರಣ : ಮತ್ತೊಬ್ಬ ಆರೋಪಿ ಬಂಧನ – vishwanews24
ಮುದರಂಗಡಿ ಡೇವಿಡ್ ಡಿಸೋಜ ಹತ್ಯೆ ಪ್ರಕರಣ: ಹಂತಕರಿಗೆ ಬೈಕ್ ಒದಗಿಸಿದ್ದ ಮತ್ತೊಬ್ಬಆರೋಪಿ ಬಂಧನ
ಉಡುಪಿ : ಮುದರಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಗುತ್ತಿಗೆದಾರ ಡೇವಿಡ್ ಡಿಸೋಜ ಅವರ ಶೂಟೌಟ್ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸರು, ಶೂಟರ್ಗಳಿಗೆ ಬೈಕ್ ಒದಗಿಸಿದ ಮತ್ತೊಬ್ಬ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಇದರೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಬೈಂದೂರು ಬಾಳಿಹಿತ್ಲು ನಿವಾಸಿ ಲೋಕೇಶ್ ತೇಜ ಕೊಠಾರಿ (42) ಬಂಧಿತ ಆರೋಪಿ.
ಆರೋಪಿ ಲೋಕೇಶ್ ಈ ಹಿಂದೆ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದಾಗ, ಈ ಪ್ರಕರಣದ ಪ್ರಮುಖ ಆರೋಪಿ ಕಿಶೋರ್ ರಾಮ ಪೂಜಾರಿಯ ಪರಿಚಯವಾಗಿ ಆತನೊಂದಿಗೆ ಸ್ನೇಹ ಬೆಳೆಸಿದ್ದನು. ಕೃತ್ಯ ಎಸಗಲು ನೇರವಾಗಿ ಭಾಗಿಯಾಗಿದ್ದ ಶೂಟರ್ಗಳಾದ ಅನ್ಮೋಲ್ ರಸ್ತೋಗಿ ಹಾಗೂ ರಾಜು ಎಂಬುವವರಿಗೆ ಲೋಕೇಶ್ ಬೈಕ್ ಒದಗಿಸಿದ್ದಲ್ಲದೆ, ಇತರ ಆರೋಪಿಗಳೊಂದಿಗೆ ಸೇರಿ ಕೊಲೆ ನಡೆಸಲು ಸಂಚು ರೂಪಿಸಿದ್ದನು.
ವಿಶೇಷ ಕಾರ್ಯಾಚರಣೆಯಲ್ಲಿದ್ದ ಕಾರ್ಕಳ-ಪಡುಬಿದ್ರೆ ಪೊಲೀಸರು ಬೈಂದೂರಿನ ಯಡ್ತರೆ ಎಂಬಲ್ಲಿ ಆರೋಪಿ ಲೋಕೇಶ್ ತೇಜ ಕೊಠಾರಿಯನ್ನು ವಶಕ್ಕೆ ಪಡೆದು ತನಿಖಾಧಿಕಾರಿಗಳ ಮುಂದೆ ಹಾಜರುಪಡಿಸಿದ್ದಾರೆ. ಆಗಸ್ಟ್ 21ರಂದು ಆತನನ್ನು ಅಧಿಕೃತವಾಗಿ ಬಂಧಿಸಲಾಗಿದ್ದು, ಕೃತ್ಯಕ್ಕೆ ಬಳಸಿದ ಮೊಬೈಲ್ ಫೋನ್ ಹಾಗೂ ಬೈಕಿನ ಎಂಜಿನ್ ಸಂಖ್ಯೆ ಮತ್ತು ಚಾಸಿಸ್ ಸಂಖ್ಯೆಯನ್ನು ಅಳಿಸಲು (ಉಜ್ಜಲು) ಬಳಸಿದ್ದ ಗ್ರೈಂಡಿಂಗ್ ಯಂತ್ರವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
