ತೆಂಕ ಎರ್ಮಾಳ್: UPCL ನಿಂದ ತಡೆಬೇಲಿ; 20 ಮನೆಗಳ ಸಂಪರ್ಕ ರಸ್ತೆ ಬಂದ್ ,ಬೇಲಿ ತೆರವಿಗೆ ಸ್ಥಳೀಯ ನಿವಾಸಿಗಳ ಆಗ್ರಹ – Vishwanews24

Featured, ಉಡುಪಿ

ತೆಂಕ ಎರ್ಮಾಳ್: UPCL ನಿಂದ ತಡೆಬೇಲಿ; 20 ಮನೆಗಳ ಸಂಪರ್ಕ ರಸ್ತೆ ಬಂದ್ ,ಬೇಲಿ ತೆರವಿಗೆ ಸ್ಥಳೀಯ ನಿವಾಸಿಗಳ ಆಗ್ರಹ – Vishwanews24

ಪಡುಬಿದ್ರೆ : ಯುಪಿಸಿಎಲ್ ವಿದ್ಯುತ್ ಕಂಪೆನಿಯ ಪೈಪ್‌ಲೈನ್ ಹಾದುಹೋಗಿರುವ ಜಾಗದಲ್ಲಿರುವ ರಸ್ತೆಯನ್ನು ಸಾರ್ವಜನಿಕರು ಸಂಚರಿಸದಂತೆ ತಡೆಬೇಲಿ ಅಳವಡಿಸಿ ಬಂದ್ ಮಾಡಿದ್ದು, ಇದನ್ನು ಕೂಡಲೇ ತೆರವುಗೊಳಿಸಬೇಕು ಎಂದು ಒತ್ತಾಯಿಸಿದ ಘಟನೆ ತೆಂಕ ಎರ್ಮಾಳಿನಲ್ಲಿ ಗುರುವಾರ ನಡೆದಿದೆ.

ಯುಪಿಸಿಎಲ್ ಕಂಪೆನಿಯು 2009ರಲ್ಲಿ ತನ್ನ ಯೋಜನಾ ಪ್ರದೇಶದಿಂದ ಸಮುದ್ರದ ನೀರಿಗಾಗಿ ಪೈಪ್‌ಲೈನ್ ಅಳವಡಿಸಿತ್ತು. ಎರ್ಮಾಳು ಗ್ರಾಮದ ಪೆಟ್ರೋಲ್ ಬಂಕ್ ಬಳಿಯ ಬೀಡು ಬಳಿ ಪೈಪ್‌ಲೈನ್ ಹಾದು ಹೋಗುವ ಸ್ಥಳದಲ್ಲಿ ಹಲವು ಮನೆಗಳಿವೆ. ಈ ಮನೆಗಳಿಗೆ ಹಾಗೂ ಪೈಪ್‌ಲೈನ್‌ಗಾಗಿ ಸಂಪರ್ಕ ರಸ್ತೆಯನ್ನು ನಿರ್ಮಿಸಲಾಗಿತ್ತು.

ಆದರೆ ಎರಡು ದಿನಗಳಿಂದ ಇಲ್ಲಿ ತಡೆಬೇಲಿಯನ್ನು ಅಳವಡಿಸಲಾಗುತ್ತಿದ್ದು, ಗುರುವಾರ ಸ್ಥಳೀಯರು ಸ್ಥಳದಲ್ಲಿ ಜಮಾಯಿಸಿದರು. ಕಂಪೆನಿ ತಡೆಬೇಲಿ ಅಳವಡಿಸಿರುವುದರಿಂದ ಈ ಭಾಗದಲ್ಲಿ ಇರುವ ಸುಮಾರು 20 ಮನೆಗಳಿಗೆ ಸಂಪರ್ಕ ರಸ್ತೆಯೂ ಇಲ್ಲ. ನೂರಾರು ಎಕರೆ ಕೃಷಿ ಭೂಮಿ ಇದ್ದು, ಕೃಷಿ ಚಟುವಟಕೆಗೆ ತೊಂದರೆಯಾಗುತ್ತಿದೆ. ಆದ್ದರಿಂದ ಕೂಡಲೇ ತಡೆಬೇಲಿ ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.

ಮಾಜಿ ಸಚಿವ ವಿನಯಕುಮಾರ್ ಸೊರಕೆ ಸ್ಥಳಕ್ಕೆ ಆಗಮಿಸಿ ಸ್ಥಳೀಯರ ಸಮಸ್ಯೆ ಆಲಿಸಿದರು.

ತಹಶೀಲ್ದಾರ್ ಪ್ರತಿಭಾ ಆರ್. ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಈ ಬಗ್ಗೆ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು. ಅದುವರೆಗೂ ತುರ್ತು ಸಂದರ್ಭದಲ್ಲಿ ಮನೆಗಳಿಗೆ ವಾಹನ ಸಂಚರಿಸಲು ಅವಕಾಶ ಮಾಡಿಕೊಡಬೇಕು ಎಂದು ಕಂಪೆನಿ ಅಧಿಕಾರಿಗಳಿಗೆ ತಹಶೀಲ್ದಾರ್ ಸೂಚಿಸಿದರು.

ಕಂಪೆನಿಯ ಅಧಿಕಾರಿಗಳಾದ ಗಿರೀಶ್ ನಾವುಡ, ರವಿ ಜೀರೆ, ಕಾಪು ಇನ್ ಸ್ಪೆಕ್ಟರ್ ಪ್ರಕಾಶ್, ಪಡುಬಿದ್ರೆ ಸಬ್‌ ಇನ್ ಸ್ಪೆಕ್ಟರ್ ದಿಲೀಪ್, ಆರ್‌ಐ ಸುಧೀರ್ ಉಪಸ್ಥಿತರಿದ್ದರು.