ದುರ್ಬಲ ಹಾಗೂ ವಿಭಜಿತ ಭಾರತವೇ ಪ್ರಧಾನಿ ಮೋದಿ ಅವರ ಕಳೆದ ಆರು ವರ್ಷಗಳ ಆಡಳಿತದ ಕೊಡುಗೆ : ರಾಹುಲ್ ಗಾಂಧಿ -Vishwanews24

Featured, ರಾಷ್ಟ್ರ ನ್ಯೂಸ್

ದುರ್ಬಲ ಹಾಗೂ ವಿಭಜಿತ ಭಾರತವೇ ಪ್ರಧಾನಿ ಮೋದಿ ಅವರ ಕಳೆದ ಆರು ವರ್ಷಗಳ ಆಡಳಿತದ ಕೊಡುಗೆ : ರಾಹುಲ್ ಗಾಂಧಿ -Vishwanews24

ಕರೂರ್: ದುರ್ಬಲ ಹಾಗೂ ವಿಭಜಿತ ಭಾರತವೇ ಪ್ರಧಾನಿ ಮೋದಿ ಅವರ ಕಳೆದ ಆರು ವರ್ಷಗಳ ಆಡಳಿತದ ಕೊಡುಗೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ತಮಿಳುನಾಡಿನ ಕರೂರ್‌ನಲ್ಲಿ ನಡೆದ ಕಾಂಗ್ರೆಸ್ ರೋಡ್ ಶೋನಲ್ಲಿ ಮಾತನಾಡಿದ ರಾಹುಲ್ ಗಾಂಧಿ, ತಪ್ಪು ಆರ್ಥಿಕ ನೀತಿಗಳಿಂದ ದೇಶ ದುರ್ಬಲವಾಗಿದೆ. ಅಲ್ಲದೇ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನ ಅಸಹಿಷ್ಣು ನೀತಿಗಳಿಂದ ದೇಶ ವಿಭಜಿತವಾಗಿದೆ ಎಂದು ಗಂಭೀರ ಆರೋಪ ಮಾಡಿದರು.

ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ದೇಶದಲ್ಲಿ ಕೋಮು ದ್ವೇಷವನ್ನು ಹೆಚ್ಚಿಸುತ್ತಿದೆ. ವಿವಿಧತೆಯಲ್ಲೂ ಏಕತೆಗೆ ಸಾಕ್ಷಿಯಾಗಿರುವ ಅನೇಕ ಭಿನ್ನ ಭಿನ್ನ ಸಂಸ್ಕೃತಿಗಳ ಮೇಲೆ ವ್ಯವಸ್ಥಿತ ದಾಳಿ ನಡೆಸಲಾಗುತ್ತಿದೆ. ಆದರೆ ಅವರ ಈ ಉದ್ದೇಶ ಎಂದಿಗೂ ಈಡೇರುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದರು.

ದೇಶದ ಕೆಲವೇ ಕೆಲವು ಉದ್ಯಮಿಗಳ ಪರವಾಗಿರುವ ಆರ್ಥಿಕ ನೀತಿಗಳನ್ನು ಅನುಸರಿಸುತ್ತಿರುವ ಮೋದಿ ಸರ್ಕಾರ, ಅರ್ಥ ವ್ಯವಸ್ಥೆಯನ್ನು ಸಂಪೂರ್ಣವಾಗಿ ಹಾಳು ಮಾಡಿದೆ. ತನ್ನ ತಪ್ಪು ಗೋಚರವಾಗದಿರಲಿ ಎಂಬ ಕಾರಣಕ್ಕೆ ಕೋಮು ದ್ವೇಷಕ್ಕೆ ತುಪ್ಪ ಸುರಿಯುತ್ತಿದೆ ಎಂದು ರಾಹುಲ್ ಹರಿಹಾಯ್ದರು.

ಹೊಸ ಕೃಷಿ ಕಾಯ್ದೆಗಳ ಮೂಲಕ ಅನ್ನದಾತರ ಹಕ್ಕುಗಳನ್ನು ಕಸಿಯಲು ಹೊರಟಿರುವ ಮೋದಿ ಸರ್ಕಾರ, ಪ್ರತಿಭಟನಾನಿರತ ರೈತರನ್ನು ದೇಶದ್ರೋಹಿಗಳು ಎಂದು ಕರೆಯುವ ಮೂಲಕ ರೈತ ಸಮುದಾಯವನ್ನು ಅವಮಾನಿಸಿದೆ ಎಂದು ರಾಹುಲ್ ಗಾಂಧಿ ಕಿಡಿಕಾರಿದರು.

ದೇಶದ ಏಕತೆಯನ್ನು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು, ಈ ವಿಭಜನಕಾರಿ ಸಿದ್ಧಾಂತವನ್ನು ತಿರಸ್ಕರಿಸುವ ಮೂಲಕ ಭಾರತವನ್ನು ಮತ್ತೆ ಸದೃಢವನ್ನಾಗಿ ಕಟ್ಟೋಣ ಎಂದು ಜನತೆಗೆ ರಾಹುಲ್ ಗಾಂಧಿ ಕರೆ ನೀಡಿದರು.

ಇದನ್ನೂ ಓದಿ : ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣಕ್ಕೆ 1 ಲಕ್ಷ ರೂ. ದೇಣಿಗೆ ನೀಡಿದ ಶಾಸಕ ರಘುಪತಿ ಭಟ್ -Vishwanews24