ದೋಸ್ತಿ ಸರ್ಕಾರದ ಮತ್ತೆರೆಡು ವಿಕೆಟ್ ಪತನ : ಶಾಸಕ ಸುಧಾಕರ್ ಮತ್ತು ಸಚಿವ ಎಂಟಿಬಿ ನಾಗರಾಜ್ ರಾಜೀನಾಮೆ -Vishwanews24
ಬೆಂಗಳೂರು: ದೋಸ್ತಿ ಸರ್ಕಾರದ ಮತ್ತೆರೆಡು ವಿಕೆಟ್ ಪತನವಾಗಿದೆ. ಶಾಸಕ ಸುಧಾಕರ್ ಮತ್ತು ಸಚಿವ ಎಂಟಿಬಿ ನಾಗರಾಜ್ ವಿಧಾನಸೌಧದ ಸ್ಪೀಕರ್ ಕಚೇರಿಗೆ ಆಗಮಿಸಿ ರಮೇಶ್ ಕುಮಾರ್ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಎಂಟಿಬಿ ನಾಗರಾಜ್ ಮತ್ತು ಶಾಸಕ ಸುಧಾಕರ್ ರಾಜೀನಾಮೆ ನೀಡಿದ್ದು, ಸಮ್ಮಿಶ್ರ ಸರ್ಕಾರ ಅಲ್ಪಮತಕ್ಕೆ ಕುಸಿದಿ ದೆ. ರಾಜ್ಯಪಾಲರ ಭೇಟಿ ಬಳಿಕ ಮಾತನಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದು ಸಂಜೆಯೊಳಗೆ ಇನ್ನಿಬ್ಬರು ರಾಜೀನಾಮೆ ನೀಡ್ತಾರೆ ಎಂದು ಮುನ್ಸೂಚನೆ ನೀಡಿದ್ದರು.
ಶಾಸಕರಾದ ಸುಧಾಕರ್ ಹಾಗೂ ನಾಗರಾಜ್ ಅವರು ತಮ್ಮ ಕೈಬರಹದಲ್ಲಿ ರಾಜೀನಾಮೆ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಸಲ್ಲಿಸಿದ್ದು ಈ ವೇಳೆ ಇವರಿಬ್ಬರು ” ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ” ಎಂದು ಹೇಳಿದ್ದಾರೆ.
ಎಂಟಿಬಿ ನಾಗರಾಜ್, ಜೆಡಿಎಸ್ ನವರು ಮೈತ್ರಿ ಧರ್ಮ ಪಾಲಿಸುತ್ತಿಲ್ಲ. ಕಾಂಗ್ರೆಸ್ ಶಾಸಕರಿಗೆ ಅನುದಾನ ನೀಡುತ್ತಿಲ್ಲ. ಅವರಿಗೆ ಇಷ್ಟ ಬಂದಂತೆ ವರ್ಗಾವಣೆ ಮಾಡುತ್ತಿದ್ದಾರೆ. ಹೀಗಾಗಿ ಸಿಎಂ ಅವರ ಆಡಳಿತದಿಂದ ಬೇಸತ್ತು ಅತೃಪ್ತರು ಪಕ್ಷದಿಂದ ಹೊರ ಹೋಗಿದ್ದಾರೆ. ಸಿಎಂ ಹೇಳೋದು ಒಂದು, ಮಾಡೋದು ಇನ್ನೊಂದು. ರೇವಣ್ಣ ಅವರ ಮಾತು ಕೇಳಿಯೇ ಸಿಎಂ ಕೆಟ್ಟರು. ಮೈತ್ರಿ ಸರ್ಕಾರದಲ್ಲಿನ ಜೆಡಿಎಸ್ನವರ ಸರ್ವಾಧಿಕಾರಿ ಧೋರಣೆಯೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ ಎಂದು ವಾಗ್ದಾಳಿ ನಡೆಸಿದ್ದರು.

