ನರೇಂದ್ರ ಮೋದಿಯವರ ಬಿಜೆಪಿ ಸರ್ಕಾರ ಕಿತ್ತೊಗೆಯಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ನಡೆಸಲು ಕಾಂಗ್ರೆಸ್ ಕರೆ
ಮಹಾರಾಷ್ಟ್ರ ಸೇವಾಗ್ರಾಮ : ವಿಭಜನಕಾರಿ ರಾಜಕೀಯ ಮತ್ತು ದ್ವೇಷ ಮತ್ತು ಹಿಂಸೆಯ ಸಿದ್ಧಾಂತ ಅನುಸರಿಸುತ್ತಿರುವ ನರೇಂದ್ರ ಮೋದಿ ಸರ್ಕಾರವನ್ನು ಕಿತ್ತೆಸೆಯಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ನಡೆಸಬೇಕು ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ, ಸೇವಾಗ್ರಾಮದ ಮಹಾದೇವ ಭವನದಿಂದ ಗಾಂಧೀಜಿಯವರ ಹುಟ್ಟುಹಬ್ಬದ ಸಂದರ್ಭದಲ್ಲಿ ಕರೆ ನೀಡಿದೆ.
ಇಲ್ಲಿಂದ 1942ರಲ್ಲಿ ಕಾಂಗ್ರೆಸ್ ಪಕ್ಷ ಬ್ರಿಟಿಷರ ವಿರುದ್ಧ ಭಾರತ ಬಿಟ್ಟು ತೊಲಗಿ ಚಳವಳಿಗೆ ಕರೆ ನೀಡಿತ್ತು.
ಭಾರತೀಯ ಜನತಾ ಪಕ್ಷ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ ಬೂಟಾಟಿಕೆ ಪ್ರದರ್ಶಿಸುತ್ತಿದ್ದು, ಚುನಾವಣಾ ಲಾಭಕ್ಕಾಗಿ ಮಹಾತ್ಮಗಾಂಧೀಜಿಯವರ ಪರಂಪರೆಯನ್ನು ಸ್ವಾಧೀನಪಡಿಸಿಕೊಂಡಿವೆ ಎಂಬ ನಿರ್ಣಯವನ್ನು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕೈಗೊಳ್ಳಲಾಗಿದೆ.
“ಮೋದಿ ಸರ್ಕಾರ ವಿಭಜನಕಾರಿ ರಾಜಕೀಯ ಅನುಸರಿಸುತ್ತಿದ್ದು, ದ್ವೇಷ ಮತ್ತು ಹಿಂಸೆಯನ್ನು ಹರಡುತ್ತಿದೆ” ಎಂದು ನಿರ್ಣಯದಲ್ಲಿ ಆಪಾದಿಸಲಾಗಿದೆ. ಇಂಥ ವಾತಾವರಣ ಹಾಗೂ ಕಾರಣಗಳು ಗಾಂಧೀಜಿಯವರ ಹತ್ಯೆಗೂ ಕಾರಣವಾಗಿತ್ತು ಎಂದು ವಿವರಿಸಿದೆ.
ಭಾರತದ ಯೋಚನಾ ಲಹರಿ, ಅದರ ಆತ್ಮ ಹಾಗೂ ದೇಹಕ್ಕೆ ಗಾಂಧೀಜಿಯವರ ಕೊಡುಗೆ ಅಪಾರ ಹಾಗೂ ಲಾಲ್ಬಹದ್ದೂರ್ ಶಾಸ್ತ್ರಿಯವರ ಜೈ ಜವಾನ್ ಜೈಕಿಸಾನ್ ಘೋಷಣೆ ಕೇವಲ ಘೋಷಣೆಯಾಗಿರದೇ ಅದು ಜೀವನ ವಿಧಾನವಾಗಿತ್ತು ಎಂದು ಸಭೆಯಲ್ಲಿ ಬಣ್ಣಿಸಲಾಯಿತು.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ ಸಿಂಗ್, ಲೋಕಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭೆಯ ವಿರೋಧ ಪಕ್ಷದ ಮುಖಂಡ ಗುಲಾಂ ನಬಿ ಆಝಾದ್ ಮತ್ತಿತರರು ಭಾಗವಹಿಸಿದ್ದರು..

