ನಳಿನ್ ಕುಮಾರ್ ಕಟೀಲ್ ಬಯಕೆಯಂತೆ ಬಿಜೆಪಿಗೆ ದಲಿತರೊಬ್ಬರನ್ನು ಮುಖ್ಯಮಂತ್ರಿ ಮಾಡಲು ಇದು ಅತ್ಯಂತ ಸೂಕ್ತ ಅವಕಾಶ : ದಕ ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ -Vishwanews24
ನಳಿನ್ ಕುಮಾರ್ ಕಟೀಲ್ ಬಯಕೆಯಂತೆ ಬಿಜೆಪಿಗೆ ದಲಿತರೊಬ್ಬರನ್ನು ಮುಖ್ಯಮಂತ್ರಿ ಮಾಡಲು ಇದು ಅತ್ಯಂತ ಸೂಕ್ತ ಅವಕಾಶ : ದಕ ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ -Vishwanews24
ಮಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಬಹುದಿನಗಳ ಬಯಕೆಯಂತೆ ರಾಜ್ಯದಲ್ಲಿ ಬಿಜೆಪಿಗೆ ದಲಿತರೊಬ್ಬರನ್ನು ಮುಖ್ಯಮಂತ್ರಿ ಮಾಡಲು ಇದು ಅತ್ಯಂತ ಸೂಕ್ತ ಅವಕಾಶವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯಹರೀಶ್ ಕುಮಾರ್ ಹೇಳಿದ್ದಾರೆ.
ದಲಿತರೊಬ್ಬರು ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂಬ ತಮ್ಮ ಮನದಾಳದ ಬಯಕೆಯನ್ನು ನಳಿನ್ ಕುಮಾರ್ ಕಟೀಲ್ ಅವರು ಇತ್ತೀಚಿಗೆ ವ್ಯಕ್ತಪಡಸಿದ್ದರು. ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ನಳಿನ್ ಕುಮಾರ್ ಕಟೀಲ್ ಶಿಫಾರಸು ಮಾಡಿದ್ದರು. ಕಾಂಗ್ರೆಸ್ ಪಕ್ಷ ಧೀಮಂತ ಮುಖಂಡ ಖರ್ಗೆ ಅವರ ಮೇಲೆ ಪ್ರೀತಿ ವ್ಯಕ್ತ ಪಡಿಸಿರುವುದನ್ನು ಸ್ವಾಗತಿಸುವುತ್ತೇವೆ. ಖರ್ಗೆ ಹಿರಿಯ ಕಾಂಗ್ರೆಸ್ ಮುಖಂಡರು. ಸದ್ಯ ಬಿಜೆಪಿ ಅಧಿಕಾರದಲ್ಲಿ ಇರುವುದರಿಂದ ದಲಿತ ಬಿಜೆಪಿ ಮುಖಂಡರೊಬ್ಬರನ್ನು ಮುಖ್ಯಮಂತ್ರಿ ಮಾಡಲು ಸದವಕಾಶ.
ಸದ್ಯದಲ್ಲೇ ಮುಖ್ಯಮಂತ್ರಿ ಬದಲಾವಣೆ ಆಗಲಿದೆ ಎಂಬ ಸುದ್ದಿ ಬರುತ್ತಿದೆ ನಳಿನ್ ಕುಮಾರ್ ಬಿಜೆಪಿಯ ರಾಜ್ಯ ಘಟಕ ಅಧ್ಯಕ್ಷರೂ ದೆಹಲಿಯಲ್ಲಿ ಹೆಚ್ಚಿನ ಪ್ರಭಾವ ಹೊಂದಿರುವ ಮುಖಂಡರೂ ಆಗಿರುವುದರಿಂದ ದಲಿತರೊಬ್ಬರನ್ನು ಮುಖ್ಯ ಮಂತ್ರಿ ಮಾಡುವುದು ಸುಲಭವಾಗಲಿದೆ ಎಂದು ಹರೀಶ್ ಕುಮಾರ್ ಹೇಳಿದ್ದಾರೆ.
ರಾಜ್ಯ ಬಿಜೆಪಿಯಲ್ಲಿ ಪ್ರಭಾವಿ ಮತ್ತು ಹಿರಿಯ ದಲಿತ ಮುಖಂಡರು ಅನೇಕ ಮಂದಿ ಇದ್ದಾರೆ. ನಳಿನ್ ಕುಮಾರ್ ಮತ್ತು ಬಿಜೆಪಿ ಪಕ್ಷಕ್ಕೆ ಇದೊಂದು ಸುವರ್ಣಾವಕಾಶ ಎಂದವರು ಹೇಳಿದ್ದಾರೆ.
ನಳಿನ್ ಕುಮಾರ್ ಕಾಂಗ್ರೆಸ್ ಮುಖಂಡರಿಗೆ ಪುಕ್ಕಟೆ ಸಲಹೆ ನೀಡುವ ಬದಲು ಈಗ ದೊರೆತಿರುವ ಅವಕಾಶವನ್ನು ಸದುಪಯೋಗ ಮಾಡಿಕೊಂಡು ದಲಿತರೊಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವಂತಾಗಲಿ ಎಂದು ಹರೀಶ್ ಕುಮಾರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
