ನಾನಿನ್ನು ಚುನಾವಣೆಗೆ ಸ್ಪರ್ಧಿಸುವುದಿಲ್ಲ, ಆ ಸ್ಥಾನವನ್ನು ಯುವಕರಿಗೆ ಬಿಟ್ಟುಕೊಟ್ಟು ಅವರನ್ನು ಗೆಲ್ಲಿಸಲು ಶ್ರಮಿಸುತ್ತೇನೆ : ಅಭಯಚಂದ್ರ ಜೈನ್ -Vishwanews24
ನಾನಿನ್ನು ಚುನಾವಣೆಗೆ ಸ್ಪರ್ಧಿಸುವುದಿಲ್ಲ, ಆ ಸ್ಥಾನವನ್ನು ಯುವಕರಿಗೆ ಬಿಟ್ಟುಕೊಟ್ಟು ಅವರನ್ನು ಗೆಲ್ಲಿಸಲು ಶ್ರಮಿಸುತ್ತೇನೆ : ಅಭಯಚಂದ್ರ ಜೈನ್ -Vishwanews24
ಮಂಗಳೂರು: ‘ಇನ್ನು ಮುಂದೆ ಚುನಾವಣೆಗಳಲ್ಲಿ ನಾನು ಸ್ಪರ್ಧಿಸುವುದಿಲ್ಲ. ಆ ಸ್ಥಾನವನ್ನು ಯುವಕರಿಗೆ ಬಿಟ್ಟುಕೊಟ್ಟು ಅವರನ್ನು ಗೆಲ್ಲಿಸಲು ಶ್ರಮಿಸುತ್ತೇನೆ’ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಪ್ರಕಟಿಸಿದ್ದಾರೆ.
ಕಳೆದ ಚುನಾವಣೆಗೂ ಮೊದಲೇ ಆಗಿನ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಮಿಥುನ್ ರೈ ಅವರಿಗೆ ಅವಕಾಶ ಕೊಡಿ ಎಂದು ವರಿಷ್ಠರಿಗೆ ಹೇಳಿದ್ದೆ. ಚುನಾವಣೆಯಲ್ಲಿ ಹೀನಾಯವಾಗಿ ಸೋತೆ. ಪ್ರಾಮಾಣಿಕತೆ ನನ್ನನ್ನು ಗೆಲ್ಲಿಸಲಿಲ್ಲ. ಇನ್ಮುಂದೆ ಯುವಕರನ್ನು ನಿಲ್ಲಿಸಿ ಗೆಲ್ಲಿಸಲು ಪಣ ತೊಡುತ್ತೇನೆ ಎಂದು ಜೈನ್ ಹೇಳಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ವತಿಯಿಂದ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಅಗಲಿದ ಒಲಿಂಪಿಕ್ಸ್ ಪದಕ ವಿಜೇತ, ಪದ್ಮಶ್ರೀ ಮಿಲ್ಖಾ ಸಿಂಗ್ ಭಾವಚಿತ್ರಕ್ಕೆ ಗೌರವ ಸಲ್ಲಿಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ದೇಶ ಉಳಿಯಬೇಕಾದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ‘ಕಾಂಗ್ರೆಸ್ ಉಳಿಯಬೇಕಾದರೆ ಯುವಕರಿಗೆ ಹೆಚ್ಚು ಅವಕಾಶ ನೀಡಬೇಕು. ಯುವಕರಿಗೆ ಅವಕಾಶ ನೀಡಿದರೆ ಮತದಾರರಿಗೂ ಸ್ಫೂರ್ತಿ ಬರುತ್ತದೆ. ರಾಜಕಾರಣದಲ್ಲಿ ಈ ಬದಲಾವಣೆಯ ಅಗತ್ಯವಿದೆ. ಎಲ್ಲ ಹಿರಿಯರಿಗೆ ಇದೇ ಕಿವಿಮಾತು ಹೇಳುತ್ತಿದ್ದೇನೆ’ ಎಂದರು.
ಯುವ ಮುಖಂಡ ಮಿಥುನ್ ರೈ ಮಾತನಾಡಿ, ‘ದೇಶಕ್ಕೆ ಗೌರವ ತಂದುಕೊಟ್ಟವರನ್ನು ಸ್ಮರಿಸುವ ಕಾರ್ಯವನ್ನು ಕಾಂಗ್ರೆಸ್ ಮಾಡುತ್ತದೆ’ ಎಂದರು.
