ನಾವೆಲ್ಲಾ ಒಟ್ಟಿಗೆ ಪಕ್ಷ ಕಟ್ಟಿ ಮತ್ತೆ ಅಧಿಕಾರಕ್ಕೆ ತರುವತ್ತ ಕೆಲಸ ಮಾಡಲಿದ್ದೇವೆ :ಪರಮೇಶ್ವರ್ -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು : ನನಗೂ ಹಾಗೂ ಸಿದ್ಧರಾಮಯ್ಯ ನಡುವೆ ಯಾವುದೇ ಶತೃತ್ವವಿದೆ ಎಂದು ಅನಗತ್ಯವಾದ ಗೊಂದಲ ಉಂಟು ಮಾಡುವುದು ಸರಿಯಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ಸ್ಪಷ್ಟಪಡಿಸಿದರು.

ಸದಾಶಿವನಗರ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಅವರ ವಿಚಾರಣೆ ವೇಳೆ ನನಗೆ ಆರೋಗ್ಯ ಹದಗೆಟ್ಟಿದ್ದ ಕಾರಣ ಅವರನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ದೆಹಲಿಗೆ ತೆರಳಿ ಅವರ ಆರೋಗ್ಯ ಹಾಗೂ ಪರಿಸ್ಥಿತಿ ವಿಚಾರಿಸಿದೆ. ಇದೇ ಸಂದರ್ಭದಲ್ಲಿ ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಬಲವಾಗಿದೆ. ಅದನ್ನು ಇನ್ನಷ್ಟು ಬಲಿಷ್ಠಗೊಳಿಸಿ ಎಂದು ಸೋನಿಯಾಗಾಂಧಿ ಅವರು ಸಲಹೆ ನೀಡಿದರು. ಇದು ಬಿಟ್ಟರೆ ಬೇರಾವುದನ್ನು ಚರ್ಚೆ ಮಾಡಲಿಲ್ಲ. ಎಂದರು.

ಸಿದ್ದರಾಮಯ್ಯ ಹಾಗೂ ನನ್ನ ನಡುವೆ ಶತೃತ್ವ ಇರುವಂತೆ ಬಿಂಬಿಸಿರುವ ಹಿಂದೆ ಯಾರದ್ದೋ ಕೈವಾಡವಿದೆ ಎಂದೆನಿಸುತ್ತದೆ. ನಾನು ಮೂಲತಹ ಕಾಂಗ್ರೆಸ್‍ನವನು. ಕೊನೆಯವರೆಗೂ ಇಲ್ಲಿಯೇ ಉಳಿಯುತ್ತೇವೆ. ಕಾಂಗ್ರೆಸ್‍ನಲ್ಲಿ ಇರುವ ಪ್ರತಿಯೊಬ್ಬರೂ ಪಕ್ಷದ ಸಿದ್ಧಾಂತವನ್ನು ಒಪ್ಪಿದವರೇ ಆಗಿದ್ದಾರೆ. ಇಲ್ಲಿ ಹೊರಗಿಂದ ಬಂದವರು, ಮೂಲ ಕಾಂಗ್ರೆಸ್‍ನವರು ಎಂಬ ಬೇಧವಿಲ್ಲ. ಇಲ್ಲಿ ಎಲ್ಲರೂ ಕಾಂಗ್ರೆಸ್‍ನವರೆ. ನಮ್ಮೆಲ್ಲರ ನಡುವೆ ಯಾವುದೇ ಭಿನ್ನಮತವಿಲ್ಲ ಎಂದು ಹೇಳಿದರು.

ನಾವೆಲ್ಲಾ ಒಟ್ಟಿಗೆ ಪಕ್ಷ ಕಟ್ಟಿ ಮತ್ತೆ ಅಧಿಕಾರಕ್ಕೆ ತರುವತ್ತ ಕೆಲಸ ಮಾಡಲಿದ್ದೇವೆ. ಒಬ್ಬರೇ ಪಕ್ಷ ಬೆಳೆಸುತ್ತೇವೆ ಎಂದುಕೊಳ್ಳುವುದು ತಪ್ಪು. ನಮ್ಮೆಲ್ಲರ ಮಧ್ಯೆ ಆ ಒಮ್ಮತವಿದೆ ಎಂದು ಸ್ಪಷ್ಟಪಡಿಸಿದರು.