ಪ್ರತಿಪಕ್ಷಗಳು ‘ಅಲಿ’ಯನ್ನು ನಂಬುವುದಾದರೆ ; ನಾವು ‘ಬಜರಂಗ ಬಲಿ’ಯನ್ನು ನಂಬುತ್ತೇವೆ : ಯೋಗಿ ಆದಿತ್ಯನಾಥ್ – Vishwanews24

Featured, ದೇಶ, ರಾಷ್ಟ್ರ ನ್ಯೂಸ್

ಮೀರತ್‌: ಮುಸ್ಲಿಮರ ಮತಗಳು ವಿಭಜನೆಯಾಗದಿರಲಿ, ಮುಸ್ಲಿಮರೆಲ್ಲರೂ ಬಿಎಸ್‌ಪಿ-ಎಸ್‌ಪಿ ಮೈತ್ರಿಯನ್ನು ಬೆಂಬಲಿಸಿ ಎಂದು ಬಹಿರಂಗವಾಗಿಯೇ ಕೋಮು ಧ್ರುವೀಕರಣಕ್ಕೆ ಕರೆ ನೀಡಿದ ಮಾಯಾವತಿ ಅವರ ಹೇಳಿಕೆಗೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿರುಗೇಟು ನೀಡಿದ್ದಾರೆ.

ಅವರು (ಪ್ರತಿಪಕ್ಷಗಳು) ‘ಅಲಿ’ಯನ್ನು ನಂಬುವುದಾದರೆ, ನಾವು (ಬಿಜೆಪಿ) ‘ಬಜರಂಗ ಬಲಿ’ಯನ್ನು ನಂಬುತ್ತೇವೆ ಎಂದು ಯೋಗಿ ನುಡಿದರು. ಎಸ್‌ಪಿ-ಬಿಎಸ್‌ಪಿ ಮೈತ್ರಿಕೂಟ ಹಾಗೂ ಕಾಂಗ್ರೆಸ್ ಸಮಾಜದಲ್ಲಿ ಹಸಿರುವ ವೈರಸ್ ಹರಡುತ್ತಿವೆ ಎಂದು ಯೋಗಿ ಆರೋಪಿಸಿದರು.

‘ಸಹಾರಣ್‌ಪುರದಲ್ಲಿ ನಿನ್ನೆ ಮಾಯಾವತಿ ಮಾತಾಡಿರುವುದನ್ನು ನೀವು ಕೇಳಿರಲೇಬೇಕು. ನಾವು (ಮಹಾಘಟಬಂಧನ್) ಮುಸ್ಲಿಮರ ಮತಗಳನ್ನು ಪಡೆದರೆ, ಉಳಿದವರ ಬೆಂಬಲ ಅಗತ್ಯವಿಲ್ಲ ಎಂದು ಮಾಯಾವತಿ ಹೇಳಿದ್ದರು. ನಾನೂ ಸಹ ಅದೇ ರೀತಿ ಹೇಳಬಯಸುತ್ತೇನೆ, ಕಾಂಗ್ರೆಸ್, ಎಸ್‌ಪಿ, ಬಿಎಸ್ಪಿಗಳು ಆಲಿಯಲ್ಲಿ ನಂಬಿಕೆ ಇರಿಸಿದ್ದರೆ ನಾವು ಬಜರಂಗಬಲಿಯಲ್ಲಿ ನಂಬಿಕೆ ಹೊಂದಿದ್ದೇವೆ’ ಎಂದು ಮೀರತ್‌ನಲ್ಲಿ ಮಂಗಳವಾರ ನಡೆದ ರ‍್ಯಾಲಿಯಲ್ಲಿ ಯೋಗಿ ಹೇಳಿದರು.

ಬಿಎಸ್​ಪಿ ವರಿಷ್ಠೆ ಮಾಯಾವತಿ ಮುಸ್ಲಿಂ ಮತ ಸೆಳೆಯಲು ದಲಿತರ ಭಾವನೆಯೊಂದಿಗೆ ಆಟವಾಡುತ್ತಿದ್ದಾರೆ. ಮುಸ್ಲಿಂ ಸಮುದಾಯ ಮತ್ತು ದಲಿತರು ಒಗ್ಗಟ್ಟಾಗಿರಲು ಯಾವತ್ತೂ ಸಾಧ್ಯವಿಲ್ಲ. ಮುಸ್ಲಿಮರು ವಿರೋಧ ಪಕ್ಷಗಳಿಗೆ ಮಾತ್ರ ಮತ ಹಾಕಬೇಕೆಂದು ಮಾಯಾವತಿ ಹೇಳಿದ್ದಾರೆ. ಈ ಮಾತಿನ ಅರ್ಥ ಏನು? ಹಾಗಿದ್ದರೆ ಹಿಂದೂಗಳಿಗೆ ಬಿಜೆಪಿಗೆ ಓಟು ಹಾಕದೆ ಬೇರೆ ದಾರಿಯಿಲ್ಲ ಎಂದು ಮಾಯಾವತಿ ವಿರುದ್ಧ ಯೋಗಿ ಆದಿತ್ಯನಾಥ್ ಕಿಡಿಕಾರಿದ್ದಾರೆ.

‘ಈ ಪಕ್ಷಗಳು ಬಜರಂಗಬಲಿಯ ಅನುಯಾಯಿಗಳನ್ನು ಎಂದೂ ಸಹಿಸಿಕೊಳ್ಳುವುದಿಲ್ಲ ಎಂಬುನ್ನು ಸ್ಪಷ್ಟವಾಗಿಯೇ ಸಾರಿವೆ. ಹೀಗಾಗಿಯೇ ಅವರು ‘ಆಲಿ ಆಲಿ’ ಎಂದು ವೇದಿಕೆಯ ಮೇಲಿನಿಂದ ಪದೇ ಪದೇ ಹೇಳುತ್ತ ದೇಶಾದ್ಯಂತ ಹಸಿರು ವೈರಸ್‌ ಅನ್ನು ಹಬ್ಬಿಸುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದರು.