ಬಿಜೆಪಿಯಲ್ಲಿನ ಭಿನ್ನಮತ ಗಮನಿಸಿದರೆ ಶೀಘ್ರದಲ್ಲಿಯೇ ಮಧ್ಯಂತರ ಚುನಾವಣೆ ಎದುರಾಗಬಹುದು : ಸಿದ್ದರಾಮಯ್ಯ ಭವಿಷ್ಯ -Vishwanews24
ಬಿಜೆಪಿಯಲ್ಲಿನ ಭಿನ್ನಮತ ಗಮನಿಸಿದರೆ ಶೀಘ್ರದಲ್ಲಿಯೇ ಮಧ್ಯಂತರ ಚುನಾವಣೆ ಎದುರಾಗಬಹುದು : ಸಿದ್ದರಾಮಯ್ಯ ಭವಿಷ್ಯ -Vishwanews24
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟಕ್ಕೆ ಬುಧವಾರ 29 ಸಚಿವರು ಸೇರ್ಪಡೆಯಾಗಿದ್ದಾರೆ. ಆದರೆ, ನೂತನ ಕ್ಯಾಬಿನೆಟ್ ಬಗ್ಗೆ ಭವಿಷ್ಯ ನುಡಿದಿರುವ ಮಾಜಿ ಸಿಎಂ ಸಿದ್ದರಾಮಯ್ಯ , ಬಿಜೆಪಿಯಲ್ಲಿನ ಭಿನ್ನಮತ ಗಮನಿಸಿದರೆ ಶೀಘ್ರದಲ್ಲಿಯೇ ಮಧ್ಯಂತರ ಚುನಾವಣೆ ಎದುರಾಗಬಹುದು ಎಂದಿದ್ದಾರೆ.
ಈ ಬಗ್ಗೆ ಫೇಸ್ಬುಕ್ನಲ್ಲಿ ಬರೆದುಕೊಂಡಿರುವ ಅವರು, ದೆಹಲಿಯಲ್ಲಿ ಪಕ್ಷದ ಹೈಕಮಾಂಡ್ ಜೊತೆಗಿನ ಮೂರು ದಿನಗಳ ನಿರಂತರ ಚರ್ಚೆ-ಸಮಾಲೋಚನೆಗಳ ನಂತರ ರಚನೆಯಾದ ರಾಜ್ಯದ ಸಚಿವ ಸಂಪುಟವನ್ನು ನೋಡಿದರೆ ಮುಖ್ಯಮಂತ್ರಿಗಳು ಬೆಟ್ಟ ಅಗೆದು ಇಲಿ ಹಿಡಿದಂತಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ದಲಿತ ಸಮುದಾಯದ ಉದ್ಧಾರಕ್ಕೆ ಅವತಾರ ಎತ್ತಿಬಂದಂತೆ ಇತ್ತೀಚಿನ ದಿನಗಳಲ್ಲಿ ಮಾತನಾಡುತ್ತಿರುವ ಬಿಜೆಪಿ ರಾಜ್ಯ ಸಚಿವ ಸಂಪುಟ ರಚನೆಯಲ್ಲಿ ದಲಿತ ಸಮುದಾಯವನ್ನು ಸಂಪೂರ್ಣ ಕಡೆಗಣಿಸಿದೆ. ರಾಜ್ಯದ ಶೇ.24ರಷ್ಟು ಜನಸಂಖ್ಯೆ ಇರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯಕ್ಕೆ ಕೇವಲ ನಾಲ್ಕು ಸಚಿವರನ್ನು ನೀಡಿ ಅನ್ಯಾಯ ಎಸಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು, ನೂತನ ಸಚಿವ ಸಂಪುಟ ರಚನೆಯಲ್ಲಿ ಬಿಜೆಪಿಯೊಳಗಿರುವ ಭಿನ್ನಮತೀಯ ಗುಂಪುಗಳನ್ನು ತೃಪ್ತಿ ಪಡಿಸುವ ಸರ್ಕಸ್ ಕಾಣುತ್ತಿದೆಯೇ ಹೊರತು, ಜನಪರವಾದ ಸಮರ್ಥ ಆಡಳಿತ ನಡೆಸಬೇಕೆಂಬ ಸದುದ್ದೇಶ ಕಾಣುತ್ತಿಲ್ಲ. ಎಲ್ಲರನ್ನೂ ಓಲೈಸಲು ಪ್ರಯತ್ನ ನಡೆಸಿರುವ ಮುಖ್ಯಮಂತ್ರಿಗಳು ಯಾರಿಗೂ ಬೇಡದ ಒಲ್ಲದ ಕೂಸು ಆಗಿರುವಂತೆ ಕಾಣಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
ಸಾಮರ್ಥ್ಯ, ಸಾಮಾಜಿಕ ನ್ಯಾಯ, ಪ್ರಾದೇಶಿಕ ಪ್ರಾತಿನಿಧ್ಯ, ಸ್ವಚ್ಛ ರಾಜಕಾರಣ ಮೊದಲಾದ ಯಾವ ಧನಾತ್ಮಕ ಅಂಶಗಳು ಹೊಸ ಸಚಿವ ಸಂಪುಟದಲ್ಲಿ ಕಾಣಿಸುತ್ತಿಲ್ಲ. ಇತ್ತೀಚೆಗಷ್ಟೇ ಮೊಟ್ಟೆ ಖರೀದಿ ಹಗರಣದಲ್ಲಿ ಆರೋಪಿಯಾಗಿರುವ ಶಶಿಕಲಾ ಜೊಲ್ಲೆ ಅವರಿಗೆ ಸಚಿವ ಸ್ಥಾನ ನೀಡಿರುವುದು ಪಕ್ಷ ಮತ್ತು ಸಂಘಪರಿವಾರದ ನೈತಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ.
