ಬಿಜೆಪಿ ಶಿಸ್ತು ಉಳಿಸಿಕೊಂಡರೆ ಮಾತ್ರ ಪಕ್ಷ ಸದೃಢವಾಗಿ ಬೆಳೆಯಬಲ್ಲದು, ಇಲ್ಲವಾದರೆ ಕಾಂಗ್ರೆಸ್ ಸ್ಥಿತಿಯೇ ಬರಬಹುದು : ಡಿ.ವಿ. ಸದಾನಂದ ಗೌಡ -Vishwanews24

Featured, ದಕ್ಷಿಣ ಕನ್ನಡ

ಬಿಜೆಪಿ ಶಿಸ್ತು ಉಳಿಸಿಕೊಂಡರೆ ಮಾತ್ರ ಪಕ್ಷ ಸದೃಢವಾಗಿ ಬೆಳೆಯಬಲ್ಲದು, ಇಲ್ಲವಾದರೆ ಕಾಂಗ್ರೆಸ್ ಸ್ಥಿತಿಯೇ ಬರಬಹುದು : ಡಿ.ವಿ. ಸದಾನಂದ ಗೌಡ -Vishwanews24

ನಮ್ಮ ಮಾತು, ಕೆಲಸಗಳಿಂದ ಇತರರಿಗೆ ಮಾದರಿಯಾಗಬೇಕು..

ಪುತ್ತೂರು: ಶಿಸ್ತಿಗೆ ಹೆಸರಾದ ಬಿಜೆಪಿ ಈ ಕಾರಣದಿಂದಾಗಿಯೇ ಬಲಿಷ್ಠವಾಗಿ ಬೆಳೆದು ನಿಂತಿದೆ. ಅದೇ ಶಿಸ್ತು ಉಳಿಸಿಕೊಂಡರೆ ಮಾತ್ರ ಪಕ್ಷ ಸದೃಢವಾಗಿ ಬೆಳೆಯಬಲ್ಲದು. ಇಲ್ಲವಾದರೆ ಕಾಂಗ್ರೆಸ್ ಸ್ಥಿತಿಯೇ ಬರಬಹುದು ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಎಚ್ಚರಿಸಿದ್ದಾರೆ.

ಪುತ್ತೂರಿನಲ್ಲಿ ಮಂಗಳವಾರ ನಡೆದ ಜನಸೇವಕ ಸಮಾವೇಶ ಮತ್ತು ನೂತನ ಸಚಿವ ಅಂಗಾರರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಒಂದು ಕಾಲದಲ್ಲಿ ಕಾಂಗ್ರೆಸ್‌ನಲ್ಲೂ ಉತ್ತಮ ನಾಯಕರಿದ್ದರು. ಇವತ್ತು ಆ ಪಕ್ಷ ಹೀನಾಯ ಸ್ಥಿತಿಗೆ ತಲುಪಲು ಅಶಿಸ್ತೇ ಕಾರಣ. ಬಿಜೆಪಿಯನ್ನು ಪಾರ್ಟಿ ವಿದ್ ಡಿಫರೆನ್ಸ್ ಎನ್ನಲಾಗುತ್ತಿದೆ. ಈ ಶಿಸ್ತನ್ನು ನಾವೆಲ್ಲ ಉಳಿಸಿಕೊಳ್ಳಬೇಕು. ಪಕ್ಷದ ಬಗ್ಗೆ ಎಲ್ಲಿ ಮಾತನಾಡಬೇಕೋ ಅಲ್ಲೇ ಮಾತನಾಡಬೇಕು. ಎಲ್ಲೋ ಹೊಟೇಲ್‌ನಲ್ಲಿ ಕುಳಿತು ಮಾತನಾಡುವುದಲ್ಲ. ಇಲ್ಲದಿದ್ದರೆ ಕಾಂಗ್ರೆಸ್ ಸ್ಥಿತಿ ನಮಗೂ ಬರಬಹುದು ಎಂದರು.

ನಾವು ಮಾತ್ರ ನಿರಂತರ ದೇಶ ಆಳುತ್ತೇವೆ ಎಂಬ ಭ್ರಮೆ ಮತ್ತು ಅಹಂಕಾರದಲ್ಲಿದ್ದ ಕಾಂಗ್ರೆಸ್‌ನ ಅಡ್ರೆಸ್ ಹುಡುಕುವ ಸ್ಥಿತಿ ಬಂದಿದೆ. ಪ್ರತಿಪಕ್ಷವೇ ಇಲ್ಲದೆ ಕೇವಲ ಬಿಜೆಪಿಯೊಂದೇ ಆವರಿಸುವ ದಿನ ಬರಬೇಕು. ಈ ಬಾರಿ ಗ್ರಾಪಂ ಚುನಾವಣೆಯಲ್ಲಿ ರಾಜ್ಯದ ಶೇ. 63 ಸ್ಥಾನಗಳು ಬಿಜೆಪಿ ಬೆಂಬಲಿತರ ಪಾಲಾಗಿದೆ. ಅಧಿಕಾರದ ಅಮಲಿನಲ್ಲಿ ಮೆರೆಯುತ್ತಿದ್ದವರ ಅಂತಿಮ ದಿನಗಳು ಬಂದಿವೆ. ಕಾಂಗ್ರೆಸ್ ಹೋಳಾದ ಪಕ್ಷವಾಗಿದ್ದು, ಡಿಕೆಶಿ ಬಣ, ಸಿದ್ದು ಬಣ ಎಂದು ಇಬ್ಭಾಗವಾಗಿದೆ. ವಿರೋಧಿಗಳಿಗೆ ನಾವು ಆಹಾರವಾಗಬಾರದು. ನಮ್ಮ ಮಾತು, ಕೆಲಸಗಳಿಂದ ಇತರರಿಗೆ ಮಾದರಿಯಾಗಬೇಕು ಎಂದು ಸಚಿವ ಡಿವಿಎಸ್ ತಿಳಿಸಿದರು.

ಇನ್ನೆರಡು ದಿನಗಳಲ್ಲೇ ನೂತನ ಸಚಿವರಿಗೆ ಖಾತೆ ಹಂಚಿಕೆ: ಸಿಎಂ ಯಡಿಯೂರಪ್ಪ -Vishwanews24