ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ – vishwanews24
ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ
ಮಂಗಳೂರು: ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸೇವೆ ಆರಂಭಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದ್ದು, ಮಾರ್ಗದ ಸಕಲೇಶಪುರ ಘಾಟ್ ವಿಭಾಗದಲ್ಲಿ ಬುಧವಾರ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೆ.
ದಕ್ಷಿಣ ಪಶ್ಚಿಮ ರೈಲ್ವೆಯ ಮೈಸೂರು ವಿಭಾಗವು ಸಾಕಲೇಶಪುರ ಮತ್ತು ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣಗಳ ನಡುವಿನ ಸವಾಲಿನ ಘಾಟ್ ಮಾರ್ಗದಲ್ಲಿ ವಂದೇ ಭಾರತ್ ರೈಲಿನ ಪರೀಕ್ಷಾರ್ಥ ಸಂಚಾರ ನಡೆಸಿದೆ. ಕಿತ್ತಳೆ ಬಣ್ಣದ ವಂದೇ ಭಾರತ್ ರೈಲು ಘಾಟ್ನ ಏರು-ಇಳಿಜಾರಿನ ಹಳಿಗಳಲ್ಲಿ ಸಂಚರಿಸುವ ಮೂಲಕ ತಾಂತ್ರಿಕ ಪರೀಕ್ಷೆಗೆ ಒಳಪಡಿಸಲಾಗಿದೆ.
ಸಕಲೇಶಪುರ ನಿಲ್ದಾಣದಲ್ಲಿ ಶಾಸಕ ಸಿಮೆಂಟ್ ಮಂಜು ಅವರು ಪೂಜೆ ಸಲ್ಲಿಸಿ ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು.
ಪ್ರಯಾಣಿಕರ ಬದಲಿಗೆ ರೈಲಿನ ಬೋಗಿಗಳಲ್ಲಿ ಮರಳಿನ ಚೀಲಗಳನ್ನು ಇರಿಸಿ ನಿಗದಿತ ವೇಗದಲ್ಲಿ ಸಂಚರಿಸುವ ಮೂಲಕ ಭಾರದ ಪರಿಸ್ಥಿತಿಯಲ್ಲಿ ರೈಲಿನ ಕಾರ್ಯಕ್ಷಮತೆಯನ್ನು ಪರಿಶೀಲಿಸಲಾಗಿದೆ ಎಂದು ತಿಳಿದು ಬಂದಿದೆ.
ಘಾಟ್ ಮಾರ್ಗದಲ್ಲಿ ರೈಲಿನ ತಾಂತ್ರಿಕ ಸಾಮರ್ಥ್ಯ ಮತ್ತು ಸುರಕ್ಷಿತ ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲು ವಿವಿಧ ವೇಗಗಳಲ್ಲಿ ಹಲವು ಸುತ್ತಿನ ಪರೀಕ್ಷಾರ್ಥ ಸಂಚಾರ ನಡೆಸಲಾಗುತ್ತಿದೆ. ಹಂತ ಹಂತವಾಗಿ ವೇಗ ಹೆಚ್ಚಿಸಲಾಗುತ್ತಿದ್ದು, ಈ ಮಾರ್ಗದಲ್ಲಿ ವಂದೇ ಭಾರತ್ ರೈಲು ಸುರಕ್ಷಿತವಾಗಿ ಮತ್ತು ಪರಿಣಾಮಕಾರಿಯಾಗಿ ಸಂಚರಿಸಬಹುದಾದ ಗರಿಷ್ಠ ಕಾರ್ಯಾಚರಣಾ ವೇಗವನ್ನು ನಿರ್ಧರಿಸಲಾಗುತ್ತಿದೆ.
ಮುದರಂಗಡಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ : ಹಣಕಾಸಿನ ನೆರವು ನೀಡಿದ್ದ ಮತ್ತಿಬ್ಬರು ಆರೋಪಿಗಳ ಬಂಧನ – vishwanews24
ಮಂಗಳೂರು-ಬೆಂಗಳೂರು ನಡುವೆ ವಂದೇ ಭಾರತ್ ರೈಲು ಸೇವೆ ಆರಂಭಿಸಬೇಕೆಂಬ ಕರಾವಳಿ ಭಾಗದ ರೈಲು ಪ್ರಯಾಣಿಕರ ಬಹುದಿನಗಳ ಬೇಡಿಕೆಯ ಹಿನ್ನೆಲೆಯಲ್ಲಿ ಈ ಪರೀಕ್ಷಾರ್ಥ ಸಂಚಾರ ಮಹತ್ವ ಪಡೆದಿದೆ. ಸ್ವಯಂಚಾಲಿತ ತುರ್ತು ಬ್ರೇಕಿಂಗ್ ತಂತ್ರಜ್ಞಾನ ಹೊಂದಿರುವ 20 ಬೋಗಿಗಳ ವಂದೇ ಭಾರತ್ ರೈಲನ್ನು ಪರೀಕ್ಷಾರ್ಥ ಸಂಚಾರಕ್ಕಾಗಿ ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್)ಯಿಂದ ತರಲಾಗಿದೆ.
ಸಾಕಲೇಶಪುರ-ಸುಬ್ರಹ್ಮಣ್ಯ ನಡುವಿನ ಘಾಟ್ ಮಾರ್ಗವು ಕಡಿದಾದ ಏರು-ಇಳಿಜಾರು ಹಾಗೂ ಸಂಕೀರ್ಣ ಭೌಗೋಳಿಕ ಪರಿಸ್ಥಿತಿಯಿಂದ ಕೂಡಿರುವ ಹಿನ್ನೆಲೆಯಲ್ಲಿ ಇಲ್ಲಿ ನಡೆಸಲಾಗುತ್ತಿರುವ ಪರೀಕ್ಷೆ ಮಹತ್ವದ್ದಾಗಿದೆ. ಪ್ರಯಾಣಿಕರ ಸೇವೆ ಆರಂಭಿಸುವ ಮುನ್ನ ರೈಲು ಈ ಮಾರ್ಗಕ್ಕೆ ಸೂಕ್ತವೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಹಾಗೂ ಸುರಕ್ಷಿತ ಕಾರ್ಯಾಚರಣೆಗೆ ಅಗತ್ಯವಾದ ಮಾನದಂಡಗಳನ್ನು ನಿಗದಿಪಡಿಸುವುದು ಪರೀಕ್ಷಾರ್ಥ ಸಂಚಾರದ ಪ್ರಮುಖ ಉದ್ದೇಶವಾಗಿದೆ.
