ಮಂಗಳೂರು: ಅಕ್ರಮ ಗೋವು ವಧೆ ಪ್ರಕರಣ ; ಆರೋಪಿ ಆಸ್ತಿ ಮುಟ್ಟಗೋಲಿಗೆ ಅದೇಶ – Vishwanews24
ಮಂಗಳೂರು: ಅಕ್ರಮ ಗೋವು ವಧೆ ಪ್ರಕರಣ ; ಆರೋಪಿ ಆಸ್ತಿ ಮುಟ್ಟಗೋಲಿಗೆ ಅದೇಶ
ಮಂಗಳೂರು: ಗೋವು ಅಕ್ರಮ ವಧೆ ಪ್ರಕರಣವೊಂದರಲ್ಲಿ ಆರೋಪಿಯ ಜಮೀನನ್ನು ಮುಟ್ಟುಗೋಲು ಹಾಕುವಂತೆ ಸಹಾಯಕ ಆಯುಕ್ತ ಹಾಗೂ ಉಪವಿಭಾಗೀಯ ದಂಡಾಧಿಕಾರಿ ಮದನಮೋಹನ್ ಸಿ. ಆದೇಶ ಹೊರಡಿಸಿದ್ದಾರೆ.
ಗೋವನ್ನು ಅಕ್ರಮವಾಗಿ ವಧೆ ಮಾಡಲಾಗಿರುವ ಬಗ್ಗೆ ವಧೆ ಮಾಡಲಾದ ಸ್ಥಳದ ಮಾಲಕ ಯಾಕೂಬ್ ಎಂಬಾತನ ಹೆಸರಿನಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣ ಅಧಿನಿಯಮ 2020ರ ಕಲಂ 8(4) ಹಾಗೂ 8(5)ದಂತೆ ಪ್ರಕರಣ ದಾಖಲಾಗಿತ್ತು. ಕಂಕನಾಡಿ ನಗರ ಠಾಣಾ ಉಪನಿರೀಕ್ಷಕರು ದೂರು ದಾಖಲಿಸಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾಕೂಬ್ ಹೆಸರಿನಲ್ಲಿ ಅಡ್ಕೂರು ಗ್ರಾಮದ ಅದ್ಯಪಾಡಿಯಲ್ಲಿ ಡೋರ್ ನಂ.1-337 (ಸ.ನಂ.33/6)ರ 15 ಸೆಂಟ್ಸ್ ಜಮೀನನ್ನು ಸರ್ಕಾರದ ವಶಕ್ಕೆ ಪಡೆದು ಮುಟ್ಟುಗೋಲು ಹಾಕುವಂತೆ ಆದೇಶದಲ್ಲಿ ಸೂಚಿಸಲಾಗಿದೆ.
ಇದರೊಂದಿಗೆ ಪ್ರಕರಣದಲ್ಲಿ ವಶಪಡಿಸಿಕೊಳ್ಳಲಾದ ವಾಹನ ಹಾಗು ಇತರ ಸೊತ್ತುಗಳನ್ನು ಸಕ್ಷಮ ಪ್ರಾಧಿಕಾರದಿಂದ ಮೌಲ್ಯಮಾಪನ ಮಾಡಿಸಬೇಕು. ಬಳಿಕ ಅದರ ಅಂದಾಜು ಮೌಲ್ಯವನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ದೂರುದಾರರಿಗೆ ನಿರ್ದೇಶನ ನೀಡಲಾಗಿದೆ.
ಈಗಾಗಲೇ 3ನೇ ಸಿಜೆಎಂ ನ್ಯಾಯಾಲಯದಲ್ಲಿ ಪ್ರಕರಣ ಸಂಬಂಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದ್ದು, ಅದು ಮುಕ್ತಾಯಗೊಂಡ ಬಳಿಕ ಅಂತಿಮ ವರದಿಯನ್ನು ಎಸಿ ಕೋರ್ಟ್ಗೆ ಸಲ್ಲಿಸಬೇಕು. ಅಂತಿಮ ಆದೇಶ ಪ್ರತಿ ಕೂಡಾ ಜೊತೆಗಿರಬೇಕು ಎಂದು ಸೂಚಿಸಲಾಗಿದೆ.
ಬಂಟ್ವಾಳ: ಶಾಲೆಗೆಂದು ಹೋಗಿದ್ದ ಬಾಲಕಿ ನಾಪತ್ತೆ, ದೂರು ದಾಖಲು – Vishwanews24
