ಮಹಿಳೆಯರ ಮೇಲಿನ ಅಪರಾಧಗಳ ಬಗ್ಗೆ ಕುರುಡರಾಗಬೇಡಿ , ಈ ಕುರಿತು ಧ್ವನಿ ಎತ್ತಿ : ನಟಿ ರಮ್ಯಾ -Vishwanews24

Featured, ರಾಜ್ಯ ನ್ಯೂಸ್

ಮಹಿಳೆಯರ ಮೇಲಿನ ಅಪರಾಧಗಳ ಬಗ್ಗೆ ಕುರುಡರಾಗಬೇಡಿ , ಈ ಕುರಿತು ಧ್ವನಿ ಎತ್ತಿ : ನಟಿ ರಮ್ಯಾ -Vishwanews24

ಬೆಂಗಳೂರು : ಮಹಿಳೆಯ ಮೇಲೆ ಪುರುಷನೊಬ್ಬ ದೌರ್ಜನ್ಯ ಎಸಗಿದರೂ ಕೊನೆಗೆ ದೂಷಣೆಗೆ ಒಳಗಾಗುವುದು ಮಹಿಳೆಯೇ. ಹಾಗಾಗಿ ಮಹಿಳೆಯರ ಮೇಲಿನ ಅಪರಾಧಗಳ ಬಗ್ಗೆ ಕುರುಡರಾಗಬೇಡಿ. ಈ ಕುರಿತು ಧ್ವನಿ ಎತ್ತಿ ಎಂದು ಮಾಜಿ ಸಂಸದೆ, ನಟಿ ರಮ್ಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿನಿ ಮೇಲೆ ಮೈಸೂರಿನಲ್ಲಿ ನಡೆದಿರುವ ಸಾಮೂಹಿಕ ಅತ್ಯಾಚಾರ ಪ್ರಕರಣದಕ್ಕೆ ಸಂಬಂಧಿಸಿದಂತೆ ಯುವಕ–ಯುವತಿ ರಾತ್ರಿ 7.30ಕ್ಕೆ ನಿರ್ಜನ ಪ್ರದೇಶಕ್ಕೆ ಹೋಗಿದ್ದಾರೆ. ಆ ವೇಳೆಯಲ್ಲಿ ಅಲ್ಲಿಗೆ ಹೋಗಬಾರದಿತ್ತು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ನೀಡಿದ್ದ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.

ಇನ್ನು ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿರುವ ರಮ್ಯಾ, “ಇದು ನಿನ್ನ ತಪ್ಪು, ನೀನು ಆ ರೀತಿ ಮಾತನಾಡಬಾರದಿತ್ತು, ನೀನು ಆ ರೀತಿ ಮಾಡಬಾರದಿತ್ತು, ನೀನು ಆ ಉಡುಪನ್ನು ಧರಿಸಬಾರದಿತ್ತು, ತಡರಾತ್ರಿ ನೀನು ಹೊರಗೆ ಹೋಗಬಾರದಿತ್ತು, ಹೊರಗೇ ಹೋಗಬಾರದಿತ್ತು, ಮೇಕ್‌ಅಪ್‌ ಹಾಕಿಕೊಳ್ಳಬಾರದಿತ್ತು, ಯಾಕೆ ಕೆಂಪುಬಣ್ಣದ ಲಿಪ್‌ಸ್ಟಿಕ್‌..ಹೀಗೆ ನೀನು ಅದು ಮಾಡಬಾರದಿತ್ತು…ಇದು ಮಾಡಬಾರದಿತ್ತು…ನಾವು ಬದಲಾಗಬೇಕು, ನಾವು ಹೊಂದಿಕೊಳ್ಳಬೇಕು…ಈ ಅವಿವೇಕದ ಮಾತುಗಳು ಸಾಕು. ಪ್ರಾಮಾಣಿಕವಾಗಿ ಹೇಳಬೇಕಂದರೆ ಈ ದೂಷಣೆಯನ್ನು ನಾನೂ ಎದುರಿಸಿದ್ದೇನೆ. ಇದು ಇಂದಿಗೆ ಕೊನೆಯಾಗಲಿ” ಎಂದು ಬರೆದುಕೊಂಡಿದ್ದಾರೆ.