ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಬಯೋಪಿಕ್; ತೆರೆಮೇಲೆ ಬರಲಿದೆ ‘ಅಜಾತಶತ್ರು’ ಜೀವನ – Vishwanews24
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಬಯೋಪಿಕ್; ತೆರೆಮೇಲೆ ಬರಲಿದೆ ‘ಅಜಾತಶತ್ರು’ ಜೀವನ
ಬಾಲಿವುಡ್ನಲ್ಲಿ ಈಗಾಗಲೇ ಸಾಕಷ್ಟು ಬಯೋಪಿಕ್ಗಳು ಬಂದಿವೆ, ಬರುತ್ತಲಿವೆ. ಸಿನಿಮಾರಂಗ, ಕ್ರೀಡೆ, ರಾಜಕೀಯ ಹೀಗೆ ಹಲವು ಕ್ಷೇತ್ರಗಳ ಪ್ರಭಾವಿ ವ್ಯಕ್ತಿಗಳ ಬದುಕನ್ನು ತೆರೆಮೇಲೆ ತರಲಾಗುತ್ತಿದೆ. ಸಾಲಿಗೆ ಈಗ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರು ಕೂಡ ಕೇಳಿಬಂದಿದೆ. ಹೌದು, ಭಾರತ ಕಂಡಂತಹ ಅದ್ಭುತ ವಾಗ್ಮಿ, ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ಅವರ ಬಯೋಪಿಕ್ (Biopic) ಅನ್ನು ನಿರ್ಮಾಣ ಮಾಡುವುದಾಗಿ ಬಾಲಿವುಡ್ನ ಖ್ಯಾತ ನಿರ್ಮಾಣ ಸಂಸ್ಥೆ ಅನೌನ್ಸ್ ಮಾಡಿದೆ.
ವಾಜಪೇಯಿ ಅವರ ಬದುಕನ್ನು ಆಧರಿಸಿದ ಸಿನಿಮಾ
ಭಾರತೀಯರು ಕಂಡಂತಹ ಒಬ್ಬ ಉತ್ತಮ ನಾಯಕ, ಲೇಖಕ, ಕವಿ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತದ ಪ್ರಧಾನ ಮಂತ್ರಿಯಾಗಿದ್ದರು. 1996ರಲ್ಲಿ 16 ದಿನಗಳ ಕಾಲ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿ ಆಗಿದ್ದರು. ನಂತರ 1998ರ ಮಾರ್ಚ್ನಿಂದ 1999ರ ಅಕ್ಟೋಬರ್ ವರೆಗೆ ದೇಶವನ್ನು ಮುನ್ನಡೆಸಿದ್ದರು. 1999ರ ಅಕ್ಟೋಬರ್ನಿಂದ 2004ರ ಮೇ ತಿಂಗಳವರೆಗೆ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿ ಆಗಿದ್ದರು. ಒಟ್ಟು ಮೂರು ಬಾರಿ ಪ್ರಧಾನಿಯಾಗಿ ವಾಜಪೇಯಿ ಅವರು ಕೆಲಸ ಮಾಡಿದ್ದರು.
ಇದೀಗ ಅವರ ಬಗ್ಗೆ ಸಿನಿಮಾ ಮಾಡಲು ವಿನೋದ್ ಭಾನುಶಾಲಿ ಮತ್ತು ಸಂದೀಪ್ ಸಿಂಗ್ ಜತೆಯಾಗಿದ್ದಾರೆ. ಈ ಸಿನಿಮಾ ವಾಜಪೇಯಿ ಅವರ ಬದುಕನ್ನು ಆಧರಿಸಿ ಬರೆದ ‘ಅನ್ಟೋಲ್ಡ್ ವಾಜಪೇಯಿ: ದಿ ಪೊಲಿಟಿಶಿಯನ್ ಆ್ಯಂಡ್ ಪ್ಯಾರಡಾಕ್ಸ್’ ಎಂಬ ಪುಸ್ತಕವನ್ನು ಅಧರಿಸಿದೆ. ಈ ಪುಸ್ತಕವನ್ನು ಲೇಖಕ ಉಲ್ಲೇಖ್ ಅವರು ಬರೆದಿದ್ದಾರೆ. ಸದ್ಯಕ್ಕೆ ವಿನೋದ್ ಭಾನುಶಾಲಿ ಮತ್ತು ಸಂದೀಪ್ ಸಿಂಗ್ ಈ ಪುಸ್ತಕದ ಹಕ್ಕುಗಳನ್ನು ಖರೀದಿಸಿದ್ದಾರೆ. ಸಿನಿಮಾಗೆ ‘ಅಟಲ್’ ಎಂದು ಹೆಸರಿಟ್ಟಿದ್ದು, ನಿರ್ದೇಶಕರು ಯಾರು ಎಂಬುದಿನ್ನೂ ಫೈನಲ್ ಮಾಡಿಲ್ಲ. ಅಲ್ಲದೆ, ಅಟಲ್ ಬಿಹಾರಿ ವಾಜಪೇಯಿ ಅವರ ಪಾತ್ರವನ್ನು ಯಾರು ಮಾಡಲಿದ್ದಾರೆ ಎಂಬುದನ್ನು ಕೂಡ ಚಿತ್ರತಂಡ ಬಹಿರಂಗಪಡಿಸಿಲ್ಲ.
‘Main Rahoon Ya Na Rahoon, Yeh Desh Rehna Chahiye – Shri Atal Bihari Vajpayee.’
Presenting #ATAL, a film on the life story of India’s most exemplary leader, renowned poet, and a visionary.@vinodbhanu @directorsamkhan #KamleshBhanushali #VishalGurnani pic.twitter.com/ZbmY9KglRF— Sandeep Singh (@thisissandeeps) June 28, 2022
ಈ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಸಂದೀಪ್ ಸಿಂಗ್, ಈ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ‘ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತೀಯ ಇತಿಹಾಸ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರು. ಅವರು ತಮ್ಮ ಮಾತುಗಳಿಂದ ಶತ್ರುಗಳ ಹೃದಯವನ್ನು ಗೆದ್ದಂಥವರು. ರಾಷ್ಟ್ರವನ್ನು ಸಮರ್ಥವಾಗಿ ಮುನ್ನಡೆಸಿದವರು. ಸಿನಿಮಾದಲ್ಲಿ ಯಾವಾಗಲೂ ಜನರಿಗೆ ಗೊತ್ತಿಲ್ಲದ ಕಥೆಗಳನ್ನು ಹೇಳಬೇಕು ಎಂಬುದು ನನ್ನ ಆಸೆ. ಈ ಸಿನಿಮಾದಲ್ಲಿ ಅದು ಆಗಲಿದೆ. ವಾಜಪೇಯಿ ಅವರ ರಾಜಕೀಯ ಸಿದ್ಧಾಂತಗಳನ್ನು ಮಾತ್ರವಲ್ಲದೆ ಅವರ ಮಾನವೀಯ ಮತ್ತು ಕಾವ್ಯಾತ್ಮಕ ಅಂಶಗಳನ್ನು ಇಲ್ಲಿ ಅನಾವರಣಗೊಳಿಸುವ ಉದ್ದೇಶ ಇಟ್ಟುಕೊಂಡಿದ್ದೇವೆ’ಎಂದು ನಿರ್ಮಾಪಕ ಸಂದೀಪ್ ಸಿಂಗ್ ಹೇಳಿದ್ದಾರೆ.
2023ರ ಆರಂಭದಲ್ಲಿ ‘ಅಟಲ್’ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ. 2023ರ ಕ್ರಿಸ್ಮಸ್ಗೆ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. 2023ರ ಡಿ.25ರಂದು ಅಟಲ್ ಬಿಹಾರಿ ವಾಜಪೇಯಿ ಅವರ 99ನೇ ಜನ್ಮ ಜಯಂತಿ. ಅಂದೇ ಸಿನಿಮಾವನ್ನು ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ವಿನೋದ್ ಭಾನುಶಾಲಿ, ಸಂದೀಪ್ ಸಿಂಗ್ ಜೊತೆಗೆ ಸ್ಯಾಮ್ ಖಾನ್, ಕಮಲೇಶ್ ಭಾನುಶಾಲಿ, ವಿಶಾಲ್ ಗುರ್ನಾನಿ, ಜೀಶಾನ್ ಅಹ್ಮದ್, ಶಿವ್ ಶರ್ಮಾ, ಜೂಹಿ ಪರೇಖ್ ಮೆಹ್ತಾ ಅವರು ಕೂಡ ಚಿತ್ರಕ್ಕೆ ನಿರ್ಮಾಪಕರಾಗಿದ್ದಾರೆ. ಅಂದಹಾಗೆ, ಈ ಹಿಂದೆ ನರೇಂದ್ರ ಮೋದಿ ಬಯೋಪಿಕ್ ಅನ್ನು ಸಂದೀಪ್ ಸಿಂಗ್ ನಿರ್ಮಾಣ ಮಾಡಿದ್ದರು.
ಉದಯಪುರ ಪ್ರಕರಣ : ಕರ್ನಾಟಕದಾದ್ಯಂತ ಹೈ ಅಲರ್ಟ್ ಘೋಷಣೆ – Vishwanews24
