ಮುಸ್ಲಿಮರು ಗೋವುಗಳ ರಕ್ಷಣೆಗೆ ಮುಂದಾಗಲಿ ; ‘ಮೋದಿ ಮತ್ತು ಯೋಗಿ ಆದಿತ್ಯನಾಥ್ ಮುಸ್ಲಿಂ ವಿರೋಧಿಗಳಲ್ಲ: ರಾಮ್ದಾಸ್
ನವದೆಹಲಿ: ‘ಗೋ ರಕ್ಷಣೆ ಹೆಸರಿನಲ್ಲಿ ಕೆಲವು ಮುಸ್ಲಿಮರ ಮೇಲೆ ದೌರ್ಜನ್ಯ ನಡೆದಿದೆ. ಆದರೆ, ಮುಸ್ಲಿಮರು ಸಹ ಗೋವುಗಳ ರಕ್ಷಣೆಗೆ ಸನ್ನದ್ಧರಾಗಬೇಕು’ ಎಂದು ಕೇಂದ್ರ ಸಚಿವ ರಾಮ್ದಾಸ್ ಆಠವಳೆ ಹೇಳಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕುರಿತಾದ ‘ಮುಸಲ್ಮಾನ್ ಔರ್ ಯೋಗಿ ಆದಿತ್ಯನಾಥ್’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘ದೇಶದ ಬಲವರ್ಧನೆಗೆ ಹಿಂದೂ-ಮುಸ್ಲಿಂ ಸಾಮರಸ್ಯ ಅಗತ್ಯ. ಮೋದಿ ಸರ್ಕಾರ ಅಧಿಕಾರಿಕ್ಕೆ ಬಂದ ನಂತರ ಕೆಲವು ಮುಸ್ಲಿಮರು ಗೋ ರಕ್ಷಣೆ ಹೆಸರಿನಲ್ಲಿ ಕಿರುಕುಳ ಅನುಭವಿಸುತ್ತಿದ್ದಾರೆ. ಆದರೆ, ಮುಸ್ಲಿಮರು ಹಿಂದೂಗಳು ಪೂಜಿಸುವ ಗೋವುಗಳ ರಕ್ಷಣೆಗೆ ಮುಂದಾಗಬೇಕು’ ಎಂದರು.
‘ಮೋದಿ ಮತ್ತು ಯೋಗಿ ಆದಿತ್ಯನಾಥ್ ಮುಸ್ಲಿಂ ವಿರೋಧಿಗಳಲ್ಲ. ಎಲ್ಲರೊಂದಿಗೆ, ಎಲ್ಲರ ವಿಕಾಸವೆಂಬ (ಸಬ್ಕಾ ಸಾಥ್ ಸಬ್ಕಾ ವಿಕಾಸ್) ಘೋಷಣೆಯೇ ಇದಕ್ಕೆ ಸಾಕ್ಷಿ’ ಎಂದು ತಿಳಿಸಿದರು.
‘ಆದಿತ್ಯನಾಥ್ ಉತ್ತರಪ್ರದೇಶದಲ್ಲಿ ನಕ್ಷತ್ರದಂತೆ ಕಂಗೊಳಿಸುತ್ತಿದ್ದಾರೆ. ಹಿಂದು ಮತ್ತು ಮುಸ್ಲಿಂ ನಡುವೆ ಸಂಘರ್ಷ ಸೃಷ್ಟಿಸುವವರ ಪ್ರಯತ್ನವನ್ನು ವಿಫಲಗೊಳಿಸಬೇಕು. ಅಯೋಧ್ಯೆ ವಿವಾದದ ವಿರುದ್ಧ ಹಿಂದೂ-ಮುಸ್ಲಿಮರು ಕಿತ್ತಾಟ ನಡೆಸದೆ ಸುಪ್ರೀಂ ಕೋರ್ಟ್ ತೀರ್ಪು ಬರುವವರೆಗೂ ನಿರೀಕ್ಷಿಸಬೇಕು’ ಎಂದರು..
ಈ ಪುಸ್ತಕದ ಲೇಖಕ ಪತ್ರಕರ್ತ ಇರ್ಫಾನ್ ಶೈಖ್. ಆದಿತ್ಯನಾಥ್ ಅವರ ಜೀವನ ಮತ್ತು ಕೆಲಸ, ಅವರ ರಾಜಕೀಯ ವಿಕಸನ ಮತ್ತು ಮುಸ್ಲಿಮರೊಂದಿಗಿನ ಸಂಬಂಧವನ್ನು ಈ ಪುಸ್ತಕ ಒಳಗೊಂಡಿದೆ.

