ಹರ್ಯಾಣ : ಬಿಜೆಪಿಗೆ ಪಕ್ಷೇತರರ ಬೆಂಬಲ ,ಸರ್ಕಾರದ ರಚನೆಗೆ ಮುಂದಾದ ಕಮಲ ಪಡೆ -Vishwanews24

Featured, ರಾಷ್ಟ್ರ ನ್ಯೂಸ್

ನವದೆಹಲಿ: ಚುನಾವಣಾ ಫಲಿತಾಂಶದ ನಂತರ ಹರ್ಯಾಣ ರಾಜಕೀಯ ಕ್ಷಣ ಕ್ಷಣಕ್ಕೂ ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಎಲ್ಲ ಪಕ್ಷೇತರ 7 ಹಾಗೂ ಹರ್ಯಾಣ ಲೋಕಹಿತ ಪಕ್ಷದ ಒಬ್ಬ ಶಾಸಕರು ಬಿಜೆಪಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.

ಹರ್ಯಾಣದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ಶತಾಯಗತಾಯ ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕೆಂದು ತಂತ್ರ ಹೆಣೆಯುತ್ತಿವೆ. ಒಂದೆಡೆ ಕಾಂಗ್ರೆಸ್ ಜನನಾಯಕ್ ಜನತಾ ಪಕ್ಷ(ಜೆಜೆಪಿ)ದ ನಾಯಕ ದುಶ್ಯಂತ್ ಚೌಟಾಲಾ ಅವರನ್ನು ಸೆಳೆಯಲು ಯತ್ನಿಸುತ್ತಿದೆ. ಬಿಜೆಪಿಯು ಸಹ ಗುರುವಾರ ಚೌಟಾಲಾ ಅವರನ್ನು ಸಂಪರ್ಕಿಸಲು ಯತ್ನಿಸಿತ್ತು. ಆದರೆ ಚೌಟಾಲಾ ಅವರು ಮುಖ್ಯಮಂತ್ರಿ ಹುದ್ದೆ ನೀಡುವವರಿಗೆ ತಮ್ಮ ಬೆಂಬಲ ಎಂದು ಪಟ್ಟು ಹಿಡಿದ್ದಾರೆ.

ನಿನ್ನೆ ಚೌಟಾಲಾ ಅವರನ್ನು ಎರಡೂ ರಾಜಕೀಯ ಪಕ್ಷಗಳ ನಾಯಕರು ಸಂಪರ್ಕಿಸಿದ್ದಾರೆ. ಮುಖ್ಯಮಂತ್ರಿ ಹುದ್ದೆಗೆ ಚೌಟಾಲಾ ಬೇಡಿಕೆ ಇಟ್ಟಿದ್ದಾರೆ. ಅಲ್ಲದೆ ಇಂದು ತಮ್ಮ ನಿರ್ಧಾರ ತಿಳಿಸುವುದಾಗಿ ಗುರುವಾರ ಹೇಳೀದ್ದರು. ಇದೀಗ ಭಾರೀ ಬೆಳವಣಿಗೆ ನಡೆದಿದ್ದು, 8 ಪಕ್ಷೇತರ ಶಾಸಕರು ಬಿಜೆಪಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ. ಈ ಮೂಲಕ ಬಿಜೆಪಿ ಹರ್ಯಾಣದಲ್ಲಿ ಸರ್ಕಾರ ರಚಿಸುವುದು ಬಹುತೇಕ ಖಚಿತವಾಗಿದೆ. ಈ ಮೂಲಕ ಹರ್ಯಾಣ ರಾಜಕೀಯ ದಂಗಲ್‍ಗೆ ತೆರೆ ಬಿದ್ದಿದೆ.