ಹಿಂದುತ್ವ ಉಳಿಯಬೇಕಾದರೆ ಹಿಂದೂ ದಂಪತಿಗಳು ಕನಿಷ್ಠ 5 ಮಕ್ಕಳನ್ನು ಪಡೆಯಬೇಕು : ಬಿಜೆಪಿ ಶಾಸಕ ಸುರೇಂದ್ರ ಸಿಂಗ್
ಲಕ್ನೋ : ಶ್ರೀ ರಾಮನಿಗೆ ಕೂಡ ದೇಶದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ಕೆಲ ದಿನಗಳ ಹಿಂದೆ ಹೇಳಿ ಸುದ್ದಿಯಾಗಿದ್ದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಇದೀಗ ಇನ್ನೊಂದು ವಿವಾದಾತ್ಮಕ ಹೇಳಿಕೆ ನೀಡಿ ಹಿಂದುತ್ವ ಉಳಿಯಬೇಕಾದರೆ ಹಿಂದೂ ದಂಪತಿಗಳು ಕನಿಷ್ಠ 5 ಮಕ್ಕಳನ್ನು ಪಡೆಯಬೇಕು ಎಂದಿದ್ದಾರೆ.
ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು ದೇಶದಲ್ಲಿ ಹಿಂದೂಗಳ ಜನಸಂಖ್ಯೆಯನ್ನು ಹೆಚ್ಚಿಸಲು ಇದು ಅಗತ್ಯವಾಗಿದೆ ಎಂದರು. ”ಪ್ರತಿಯೊಂದು ದಂಪತಿ ಕನಿಷ್ಠ 5 ಮಕ್ಕಳನ್ನು ಪಡೆಯಬೇಕೆಂಬುದು ಪ್ರತಿಯೊಬ್ಬ ಮಹಂತನ ಆಸೆಯಾಗಿದೆ. ಈ ರೀತಿಯಾಗಿ ಜನಸಂಖ್ಯೆ ನಿಯಂತ್ರಣ ದಲ್ಲಿರುತ್ತದೆ ಹಾಗೂ ಹಿಂದುತ್ವ ಕೂಡ ಭದ್ರಗೊಳ್ಳುತ್ತದೆ” ಎಂದು ಅವರು ಹೇಳಿದ್ದಾರೆ.
ಉತ್ತರ ಪ್ರದೇಶದ ಬಲ್ಲಿಯ ಕ್ಷೇತ್ರದ ಶಾಸಕನಾಗಿರುವ ಸಿಂಗ್ ಈ ಹಿಂದೆ ”ಭಾರತ್ ಮಾತಾ ಕಿ ಜೈ ಹೇಳದವರು ಪಾಕಿಸ್ತಾನಿಗಳು” ಎಂದು ಹೇಳಿ ವಿವಾದಕ್ಕೀಡಾಗಿದ್ದರು. ”ಸರಕಾರಿ ಅಧಿಕಾರಿಗಳಿಗಿಂತ ಸೂಳೆಯರು ಉತ್ತಮರಾಗಿದ್ದಾರೆ,” ”ಪ್ರಧಾನಿ ನರೇಂದ್ರ ಮೋದಿ ಶ್ರೀ ರಾಮನ ಅವತಾರ” ಹಾಗೂ ”ಮೊಬೈಲ್ ಗಳು ಅತ್ಯಾಚಾರಕ್ಕೆ ಕಾರಣ” ಎಂಬಿತ್ಯಾದಿ ಹೇಳಿಕೆಗಳಿಂದಲೂ ಅವರು ಸುದ್ದಿಯಾಗಿದ್ದರು.
