ಹೈಕೋರ್ಟ್‌ನಲ್ಲಿ ವಿವಾದ ಅಂತ್ಯ:ಮರೀನಾ ಬೀಚ್‌ನಲ್ಲೇ ಕರುಣಾ ಸಮಾಧಿ

Featured, ರಾಜ್ಯ ನ್ಯೂಸ್

ಚೆನ್ನೈ: ಮರೀನಾ ಬೀಚ್‌ನಲ್ಲಿ ಡಿಎಂಕೆ ಅಧಿನಾಯಕ ಕರುಣಾನಿಧಿ ಅವರ ಅಂತ್ಯ ಸಂಸ್ಕಾರಕ್ಕೆ ತಮಿಳುನಾಡು ಹೈಕೋರ್ಟ್‌ ಅನುಮತಿ ನೀಡಿದ್ದು. ಅವಕಾಶ ನೀಡಲು ನಿರಾಕರಿಸಿದ್ದ ತಮಿಳುನಾಡು ಎಐಎಡಿಎಂಕೆ ಸರ್ಕಾರಕ್ಕೆ ಮುಖಭಂಗವಾಗಿದೆ.

ಅಣ್ಣಾ ದೊರೈ ಸಮಾಧಿ ಪಕ್ಕದಲ್ಲೇ ಅಂತ್ಯ ಸಂಸ್ಕಾರಕ್ಕೆ ಅವಕಾಶ ಮಾಡಿಕೊಡಬೇಕು ಡಿಎಂಕೆ ಎಂದು ಮನವಿ ಮಾಡಿತ್ತು. ಸರ್ಕಾರ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಡಿಎಂಕೆ ಹೈಕೋರ್ಟ್‌ ಮೆಟ್ಟಿಲೇರಿತ್ತು.

ಮರೀನಾ ಬೀಚ್‌ನಲ್ಲಿ ಸಮಾಧಿ ಮಾಡಲು ಅವಕಾಶ ನೀಡಬಾರದು ಎಂದು ಟ್ರಾಫಿಕ್‌ ರಾಮಸ್ವಾಮಿ ಸೇರಿದಂತೆ ಐವರು ಹೈ ಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಐವರೂ ಅರ್ಜಿಗಳನ್ನು ವಾಪಾಸ್‌ ಪಡೆದಿದ್ದರು.

ಈ ವಿವಾದದ ಕುರಿತು ಮಂಗಳವಾರ ಮಧ್ಯರಾತ್ರಿವರೆಗೂ ವಿಚಾರಣೆ ನಡೆಯಿತಾದರೂ ಯಾವುದೇ ಆದೇಶ ಹೊರಬೀಳದೆ ಬುಧವಾರ ಬೆಳಗ್ಗೆ 8 ಗಂಟೆಗೆ ವಿಚಾರಣೆ ಮುಂದೂಡಿಕೆಯಾಗಿತ್ತು.

ಕರ್ನಾಟಕ ಮೂಲದ ಹಂಗಾಮಿ ಸಿಜೆ ಹುಲುವಾಡಿ ಜಿ.ರಮೇಶ್‌ ನಿವಾಸದಲ್ಲಿ ವಿಚಾರಣೆ ನಡೆಯಿತು. ಬುಧವಾರ ಬೆಳಗ್ಗೆ 8 ಗಂಟೆಗೆ ಆರಂಭವಾದ ಅರ್ಜಿ ಸುಧೀರ್ಘ‌ ವಿಚಾರಣೆ 2 ಗಂಟೆಗಳ ಬಳಿಕ ಅಂತ್ಯಗೊಂಡು ಕೋರ್ಟ್‌ ತೀರ್ಪು ಹೊರಹಾಕಿದೆ.