ಉಡುಪಿ : ಹೆಣ್ಣು ಮಗುವಿನ ಅಕ್ರಮ ಮಾರಾಟ ಪ್ರಕರಣ ; ವೈದ್ಯ ಸಹಿತ ನಾಲ್ವರು ಆರೋಪಿಗಳ ಬಂಧನ -vishwanews24

Featured, ಉಡುಪಿ

ಉಡುಪಿ : ಹೆಣ್ಣು ಮಗುವಿನ ಅಕ್ರಮ ಮಾರಾಟ ಪ್ರಕರಣ ; ವೈದ್ಯ ಸಹಿತ ನಾಲ್ವರು ಆರೋಪಿಗಳ ಬಂಧನ

ಉಡುಪಿ : ಒಂದು ತಿಂಗಳ ಹೆಣ್ಣು ಮಗುವನ್ನು ಅಕ್ರಮವಾಗಿ ಮಾರಾಟ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ವೈದ್ಯರು ಸೇರಿದಂತೆ ನಾಲ್ವರು ಆರೋಪಿಗಳನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.

ಉಡುಪಿ ಕಾಮತ್ ನರ್ಸಿಂಗ್ ಹೋಮ್‌ನ ವೈದ್ಯ ಡಾ.ಕೆ.ಸುರೇಂದ್ರ ಕಾಮತ್(76) ಹಾಗೂ ಸಂತೆಕಟ್ಟೆ ನೇಜಾರಿನ ರಾಜೀವನಗರ ನಿವಾಸಿ ಎಸ್. ಪ್ರಕಾಶ್(50), ಕಾರ್ಕಳ ಸೂಡದ ಸಂಪತ್(22) ಮತ್ತು ಕೆದಿಂಜೆ ನಂದಳಿಕೆಯ ಸುಪ್ರೀತಿ(22) ಬಂಧಿತ ಆರೋಪಿಗಳು.

ಜೂ.19ರಂದು ಬ್ರಹ್ಮಾವರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯ ವಲಯ ಮೇಲ್ವಿಚಾರಕರು ಮಕ್ಕಳ ರಕ್ಷಣಾ ಘಟಕಕ್ಕೆ ದೂರವಾಣಿ ಕರೆ ಮಾಡಿ ಸಂತೆಕಟ್ಟೆ ನೇಜಾರಿನ ದಂಪತಿ ಪ್ರಕಾಶ್ ಹಾಗೂ ಪೂರ್ಣಿಮಾ ಎಂಬವರು ಸುಮಾರು 1 ತಿಂಗಳ ಹೆಣ್ಣು ಮಗುವನ್ನು ತಂದು ಯಾವುದೇ ಕಾನೂನಾತ್ಮಕ ಪ್ರತಿಕ್ರಿಯೆಗಳಿಲ್ಲದೆ ಅನಧಿಕೃತವಾಗಿ ಸಾಕುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದರು.

ಅದರಂತೆ ಉಡುಪಿ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿಗಳು ಬ್ರಹ್ಮಾವರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಳ ಕಚೇರಿಯ ವಲಯ ಮೇಲ್ವಿಚಾರಕರೊಂದಿಗೆ ಜೂ.19ರಂದು ಪ್ರಕಾಶ್ ಅವರ ಮನೆಗೆ ಭೇಟಿ ನೀಡಿದ್ದು, ಆಗ ಪೂರ್ಣಿಮಾ, ಪ್ರಕಾಶ್, ಒಂದು ತಿಂಗಳ ಹೆಣ್ಣು ಮಗು ಹಾಗೂ ಪೂರ್ಣಿಮಾ ಅವರ ಅಕ್ಕ ಲಕ್ಷ್ಮೀ ಮನೆಯಲ್ಲಿ ಹಾಜರಿದ್ದರು. ಈ ಬಗ್ಗೆ ಪ್ರಶ್ನಿಸಿದಾಗ ಆರೋಪಿಗಳು ಅನುಮಾನಾಸ್ಪದ ಹೇಳಿಕೆ ನೀಡಿದ್ದರು ಎಂದು ದೂರಲಾಗಿದೆ.

ಈ ಬಗ್ಗೆ ಕೂಲಂಕುಷವಾಗಿ ವಿಚಾರಿಸಿದಾಗ ಎಸ್.ಪ್ರಕಾಶ್ ಮತ್ತು ಪೂರ್ಣಿಮಾ ಮದುವೆಯಾಗಿ 11 ವರ್ಷ ಗಳಾದರೂ ಮಕ್ಕಳಾಗದೇ ಇದ್ದು, ಈ ಕಾರಣದಿಂದ ಅವರು ಉಡುಪಿ ಕಾಮತ್ ನರ್ಸಿಂಗ್ ಹೋಮ್‌ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆ ಸಂದರ್ಭದಲ್ಲಿ ಲಕ್ಷ್ಮೀ ಅವರ ಸ್ನೇಹಿತರಿಂದ ಉಡುಪಿ ಕಾಮತ್ ನರ್ಸಿಂಗ್ ಹೋಮ್‌ನಲ್ಲಿ ಮಗು ಇರುವ ವಿಚಾರ ತಿಳಿದು ಆಸ್ಪತ್ರೆಗೆ ಭೇಟಿ ನೀಡಿದರು. ಅಲ್ಲಿನ ವೈದ್ಯ ಡಾ.ಕೆ.ಸುರೇಂದ್ರ ಕಾಮತ್ ಬಳಿ ಪ್ರಕಾಶ್ ಮತ್ತು ಪೂರ್ಣಿಮಾ ಮಗುವನ್ನು ನೀಡುವಂತೆ ಕೇಳಿಕೊಂಡಿದ್ದರು.

ಅದಕ್ಕೆ ಡಾ.ಕೆ.ಸುರೇಂದ್ರ ಕಾಮತ್ ಒಪ್ಪಿ ಒಂದು ತಿಂಗಳ ಹಿಂದೆ ಹೆಣ್ಣು ಮಗುವನ್ನು ಪ್ರಕಾಶ್ ಮತ್ತು ಪೂರ್ಣಿಮಾ ದಂಪತಿಗೆ ನೀಡಿ, ಮಗುವಿನ ಜನನ ಪ್ರಮಾಣ ಪತ್ರವನ್ನು ಮಾಡಿಕೊಟ್ಟಿದ್ದರು. ನಂತರ ಮಗುವಿನ ಜನನ ಪ್ರಮಾಣ ಪತ್ರ ಉಡುಪಿ ನಗರಸಭೆಯಲ್ಲಿ ಪಡೆದಿದ್ದು, ಮಗುವಿನ ಜೈವಿಕ ಪೋಷಕರು ಯಾರು ಎಂದು ತಿಳಿದಿರುವುದಿಲ್ಲ ಹಾಗೂ ಮಗುವಿನ ಬಗ್ಗೆ ಯಾವುದೇ ಮಾಹಿತಿಗಳು ತಿಳಿದಿಲ್ಲ ಎಂದು ದಂಪತಿ ತಿಳಿಸಿದ್ದಾರೆ.

ಆರೋಪಿಗಳು ಅಕ್ರಮ ಲಾಭ ಗಳಿಸುವ ಉದ್ದೇಶದಿಂದ ಒಳಸಂಚು ರೂಪಿಸಿ ಮಗುವಿನ ಜನನ ಪ್ರಮಾಣ ಹಾಗೂ ತಂದೆ ತಾಯಿಯ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಮಗುವನ್ನು ಕಳ್ಳ ಸಾಗಾಣಿಕೆಯ ಮೂಲಕ ಮಾರಾಟ ಮಾಡಿ ಕೃತ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಅದರಂತೆ ಆರೋಪಿಗಳ ವಿರುದ್ಧ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ ಪೊಲೀಸರು, ವೈದ್ಯ ಹಾಗೂ ಮಗು ಸ್ವೀಕರಿಸಿದ ಪ್ರಕಾಶ್‌ನನ್ನು ಬಂಧಿಸಿದರು. ತನಿಖೆ ಮುಂದು ವರೆಸಿದ ಪೊಲೀಸರು, ಮಗುವನ್ನು ನೀಡಿದ ಸಂಪತ್ ಮತ್ತು ಸುಪ್ರೀತಿ ಬಂಧಿಸಿದ್ದು, ಎಲ್ಲ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ

Leave a Reply