50 ವರ್ಷ ರಾಜಕಾರಣ ಮಾಡಿದವರು ಆರ್ಎಸ್ಎಸ್ ಶಿಬಿರದಲ್ಲಿ ಭಾಷಣ ಮಾಡಿದ್ದು ಯಕ್ಷ ಪ್ರಶ್ನೆ ! : ಸಿದ್ದರಾಮಯ್ಯ -Vishwanews24
50 ವರ್ಷ ರಾಜಕಾರಣ ಮಾಡಿದವರು ಆರ್ಎಸ್ಎಸ್ ಶಿಬಿರದಲ್ಲಿ ಭಾಷಣ ಮಾಡಿದ್ದು ಯಕ್ಷ ಪ್ರಶ್ನೆ ! : ಸಿದ್ದರಾಮಯ್ಯ -Vishwanews24
ಬೆಂಗಳೂರು: ಪ್ರಣಬ್ ಮುಖರ್ಜಿ ಸುಧೀರ್ಘ ರಾಜಕೀಯ ಜೀವನ ನಡೆಸಿದವರು. ದೇಶ ಕಂಡ ಕೆಲವೇ ಬುದ್ದಿಜೀವಿಗಳಲ್ಲಿ ಅವರು ಕೂಡ ಒಬ್ಬರು. ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್ ಆಗಿದ್ದವರು. ಸಮಸ್ಯೆ ಎದುರಾದಾಗ ಅವರು ಜವಾಬ್ದಾರಿ ಹೊತ್ತುಕೊಂಡು ತಮ್ಮ ಬುದ್ಧಿವಂತಿಕೆಯಿಂದ ನಿವಾರಿಸುತ್ತಿದ್ದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಶ್ರದ್ದಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ನಾನು ಕಾಂಗ್ರೆಸ್ ಸೇರಿದ ಮೇಲೆ ಪ್ರಣಬ್ ಅವರನ್ನು ಭೇಟಿ ಮಾಡಿದ್ದೆ. ಆಗ ಅವರು ಕೆಲವು ಸೂಚನೆಗಳನ್ನು ಕೊಟ್ಟಿದ್ದರು. ನಂತರ ಸಿಎಂ ಆದ ಮೇಲೆ ಅವರನ್ನು ನಿರಂತರ ಭೇಟಿ ಮಾಡುತ್ತಿದ್ದೆ. ಇದೇ ಕೆಪಿಸಿಸಿ ಕಚೇರಿಗೆ ಶಾಸಕರ ಮತ ಕೇಳಲು ಬಂದಿದ್ದರು ಎಂದು ನೆನಪಿಸಿಕೊಂಡರು.
ಅವರು ರಾಜ್ಯಕ್ಕೆ ನಾಲ್ಕೈದು ಬಾರಿ ಬಂದಿದ್ದರು. ಕೆಲವೊಂದು ಯೋಜನೆಗೂ ಸಹಿ ಹಾಕಿಕೊಟ್ಟಿದ್ದರು. ಪ್ರಗತಿಪರ ವಿಚಾರ ಹೇಳಿದಾಗ ಪರವಾಗಿ ನಿಲ್ಲುತ್ತಿದ್ದರು. ಅವರಿಗೆ ಹಲವು ಪ್ರಶಸ್ತಿಗಳು ಹರಿದು ಬಂದಿದ್ದವು. ಜಗತ್ತಿನ ಐವರು ಹಣಕಾಸು ಸಚಿವರಲ್ಲಿ ಇವರು ಒಬ್ಬರು. ರಾಜೀವ್ ಪ್ರಧಾನಿಯಾಗಿದ್ದಾಗ ಪಕ್ಷ ತೊರೆದು, ರಾಷ್ಟ್ರೀಯ ಸಮಾಜವಾದಿ ಕಾಂಗ್ರೆಸ್ ಪಾರ್ಟಿ ಕಟ್ಟಿದ್ದರು.
ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ, ಪ್ರಣಬ್ ಹಣಕಾಸು ಸಚಿವರಾಗಿದ್ದರು. ಇದೇ ನೋಡಿ ವಿಪರ್ಯಾಸ. ಅವರು ಆರ್ ಎಸ್ ಎಸ್ ಗೆ ಹೋಗಿದ್ದೇ ಯಕ್ಷಪ್ರಶ್ನೆ. ಆರ್ ಎಸ್ ಎಸ್ ಇದೆಯಲ್ಲ ಅದು ಕೋಮುವಾದಿ ಸಂಘಟನೆ. 50 ವರ್ಷ ರಾಜಕಾರಣ ಮಾಡಿದವರು. ಅಲ್ಲಿಗೆ ಹೋಗಿ ಭಾಷಣ ಮಾಡುತ್ತಾರೆ ಅಂದರೆ ಹೇಗೆ ? ಎಂದು ಸಿದ್ದರಾಮಯ್ಯ ಆಶ್ಚರ್ಯ ವ್ಯಕ್ತಪಡಿಸಿದರು.
