ಉಡುಪಿ : ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್’ಗಳಲ್ಲಿ ಕೊರೋನಾ ಜಾಗೃತಿ  ಸಂದೇಶ : ಡಿಸಿ ಶ್ಲಾಘನೆ – Vishwanews24

Featured, ಉಡುಪಿ

ಉಡುಪಿ : ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್’ಗಳಲ್ಲಿ ಕೊರೋನಾ ಜಾಗೃತಿ  ಸಂದೇಶ ..

2 ಡೋಸ್‌ ಕೋವಿಡ್‌ -19 ಲಸಿಕೆ ಕಡ್ಡಾಯ , ಕಡ್ಡಾಯವಾಗಿ ಮಾಸ್ಕ್‌ ಹಾಕಿಕೊಳ್ಳುವುದು ಎಂಬ ಬರಹ ..

ಸಾರಿಗೆ ಇಲಾಖೆಯ ಕಾರ್ಯ ಶ್ಲಾಘನೀಯ :  ಉಡುಪಿ ಜಿಲ್ಲಾಧಿಕಾರಿ..

ಉಡುಪಿ: ಜಿಲ್ಲೆಯಲ್ಲಿ ಕೋವಿಡ್-19‌ ಲಸಿಕೆಯ 1 ನೇ ಹಾಗೂ 2 ನೇ ಡೋಸ್‌ ವಿತರಣೆಯಲ್ಲಿ ಶೇ.100 ಪ್ರತಿಶತ ಪ್ರಗತಿ ಸಾಧಿಸಲು ಜಿಲ್ಲಾಡಳಿವು ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಹೀಗೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಅವಿರತವಾಗಿ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆ.ಎಸ್.ಆರ್.ಟಿ.ಸಿ) ಕೈ ಜೋಡಿಸಿ ಜನರಲ್ಲಿ ಕೊರೋನಾ‌ ನಿಯಮ ಪಾಲನೆ ಬಗ್ಗೆ ಜಾಗೃತಿ ಮೂಡಿಸುವ ಜವಬ್ದಾರಿಯುತ ಕಾರ್ಯ ಮಾಡುತ್ತಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಉಡುಪಿ ಜಿಲ್ಲೆಯಲ್ಲಿ ಸಂಚರಿಸುವ ಬಸ್ಸುಗಳ ಟಿಕೇಟ್‌ ಗಳಲ್ಲಿ “2 ಡೋಸ್‌ ಕೋವಿಡ್‌ -19 ಲಸಿಕೆ ಕಡ್ಡಾಯ , ಕಡ್ಡಾಯವಾಗಿ ಮಾಸ್ಕ್‌ ಹಾಕಿಕೊಳ್ಳುವುದು“ ಎಂಬ ಬರಹಗಳನ್ನು ಮುದ್ರಿಸುವ ಮುಖಾಂತರ ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಲ್ಲಿ ಹಾಗೂ ಜಿಲ್ಲೆಯ ಜನರಲ್ಲಿ ಕೋವಿಡ್‌ -19 ರ ಬಗ್ಗೆ ಜಾಗರೂಕತೆಯನ್ನು ಮೂಡಿಸುವ ನಿಟ್ಟಿನಲ್ಲಿ ನವೀನ ಶೈಲಿಯ ಯೋಜನೆಯನ್ನು ಹಮ್ಮಿಕೊಂಡಿರುವ ಸಾರಿಗೆ ಇಲಾಖೆಯ ಕಾರ್ಯ ಶ್ಲಾಘನೀಯವಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಅಭಿಪ್ರಾಯಪಟ್ಟಿದ್ದಾರೆ‌.

“ಇತರ ಇಲಾಖೆಗಳು/ನಿಗಮಗಳು ಸಾರ್ವಜನಿಕರಲ್ಲಿ ಕೋವಿಡ್-19‌ ರ ಬಗ್ಗೆ ಜಾಗೃತಿಯನ್ನು ಮೂಡಿಸುವಲ್ಲಿ ಕಾರ್ಯಪ್ರವೃತ್ತರಾಗುವಂತೆ ಹಾಗೂ ಮಾಲ್ ಗಳಲ್ಲಿ, ಸಿನಿಮಾ ಮಂದಿರಗಳಲ್ಲಿ ಮತ್ತು ಎಲ್ಲಾ ಅಂಗಡಿಗಳಲ್ಲಿ ಗ್ರಾಹಕರಿಗೆ ನೀಡುವ ಬಿಲ್ಲು / ಸ್ವೀಕೃತಿಗಳಲ್ಲಿ ಇದೇ ಮಾದರಿಯಲ್ಲಿ ಕೋವಿಡ್-19‌ ರ ಬಗ್ಗೆ ಜಾಗೃತಿಯನ್ನು ಮೂಡಿಸುವ ಬರಹಗಳನ್ನು ನಮೂದಿಸುವಂತೆ ಕೋರುತ್ತೇನೆ” ಎಂದು ಅವರು ಸಾಮಾಜಿಕ ‌ಜಾಲತಾಣದ ಮೂಲಕ ಜನರಲ್ಲಿ ಮನವಿ ಮಾಡಿದ್ದಾರೆ‌