ನಾನು ಜಾತಿಗಳನ್ನು ಒಡೆಯುತ್ತೇನೆಂದು ಅಪಪ್ರಚಾರ ಮಾಡಿ ಸೋಲಿಸಿ ಬಿಟ್ಟರು: ಸಿದ್ದರಾಮಯ್ಯ

Featured, ರಾಜ್ಯ ನ್ಯೂಸ್

ಬೆಂಗಳೂರು :ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಮೊದಲ ಬಾರಿಗೆ ಚುನಾವಣೆಯಲ್ಲಿ ಸೋತ ಕುರಿತಾದಂತೆ ತಮ್ಮ ಸಮುದಾಯದ ವೇದಿಕೆಯಲ್ಲಿ ಮಾತನಾಡಿದರು. “ನಾನು ಜಾತಿಗಳ ನಡುವೆ ವಿಷಬೀಜ ಬಿತ್ತುತ್ತಿದ್ದೇನೆ, ಜಾತಿಗಳನ್ನು ಒಡೆಯುತತಿದ್ದೇನೆ ಎಂದು ಅಪಪ್ರಚಾರ ಮಾಡಿದರು. ಕೊನೆಗೆ ನಮ್ಮನ್ನು ಸೋಲಿಸಿಯೇ ಬಿಟ್ಟರು. ಇನ್ನು ಸಾಮಾಜಿಕ ನ್ಯಾಯದಿಂದ ವಂಚಿತರಾದ ಯಾರು ಕೂಡಾ ನಮ್ಮ ಪರವಾಗಿ ಧ್ವನಿಯೆತ್ತಲಿಲ್ಲ ಎಂದು ಸಿದ್ದರಾಮಯ್ಯ ನೋವು ತೋಡಿಕೊಂಡರು.

ಅರಮನೆ ಮೈದಾನದಲ್ಲಿ ಭಾನುವಾರ ಕರ್ನಾಟಕ ಪ್ರದೇಶ ಕುರುಬರ ಸಂಘ ಹಮ್ಮಿಕೊಂಡಿದ್ದ “ಪ್ರತಿಭಾ ಪುರಸ್ಕಾರ’ದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರಾಜ್ಯದ ನಾಲ್ಕು ಕೋಟಿ ಜನರಿಗೆ ಅನ್ನಭಾಗ್ಯ, ಲಕ್ಷಾಂತರ ವಿದ್ಯಾರ್ಥಿಗಳಿಗೆ ವಾರದ ಐದು ದಿನಗಳು ಕ್ಷೀರಭಾಗ್ಯ, ಕೃಷಿಭಾಗ್ಯದಡಿ ಕೃಷಿ ಹೊಂಡಗಳ ನಿರ್ಮಾಣ, ಎಲ್ಲ ಹಿಂದುಳಿದ ಜಾತಿಗಳ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ, ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ಘೋಷಣೆ ಸೇರಿದಂತೆ ಅನೇಕ ಯೋಜನೆಗಳನ್ನು ನನ್ನ ಅಧಿಕಾರಾವಧಿಯಲ್ಲಿ ಜಾರಿಗೊಳಿಸಿದ್ದೇನೆ. ಇವೆಲ್ಲವೂ ಎಲ್ಲ ಜಾತಿಗಳಿಗೂ ಅನ್ವಯ ಆಗುವುದಿಲ್ಲವೇ ಎಂದು ಪ್ರಶ್ನಿಸಿದ ಅವರು, ಸಾಮಾಜಿಕನ್ಯಾಯದಡಿ ಇಷ್ಟೆಲ್ಲಾ ಯೋಜನೆಗಳನ್ನು ಘೋಷಿದ್ದರೂ ಆ ಜಾತಿ ವಿರೋಧಿ, ಈ ಜಾತಿ ವಿರೋಧಿಯಾಗಿ ಜಾತಿಗಳನ್ನು ಒಡೆಯುತ್ತೇನೆ ಎಂದು ಅಪಪ್ರಚಾರ ಮಾಡಿ ಸೋಲಿಸಿಬಿಟ್ಟರು. ಸಾಮಾಜಿಕ ನ್ಯಾಯದಿಂದ ಈವರೆಗೆ ವಂಚಿತರಾದವರು ಚುನಾವಣೆಯಲ್ಲಿ ಟೀಕಾಕಾರರಿಗೆ ತಿರುಗೇಟು ನೀಡಬೇಕಾಗಿತ್ತು. ಅವರು ಕೂಡ ಮೌನ ವಹಿಸಿದರು ಎಂದು ಬೇಸರ ವ್ಯಕ್ತಪಡಿಸಿದರು.