ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ ತ್ವರಿತವಾಗಿ ಸ್ಥಾಪಿಸಲು ಕಾಂಗ್ರೆಸ್ ಆಗ್ರಹ – vishwanews24
ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ ತ್ವರಿತವಾಗಿ ಸ್ಥಾಪಿಸಲು ಕಾಂಗ್ರೆಸ್ ಆಗ್ರಹ
ಕರಾವಳಿ ಹಾಗೂ ಮಲೆನಾಡಿನ ಜನರ ಪಾಸ್ಪೋರ್ಟ್ ಸೇವೆಯ ಸಮಸ್ಯೆ ನಿವಾರಿಸಲು ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ ತ್ವರಿತವಾಗಿ ಸ್ಥಾಪಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಲಾರೆನ್ಸ್ ಡಿಸೋಜಾ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಅವರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿ , ಮಂಗಳೂರಿನ ಪಾಸ್ಪೋರ್ಟ್ ಸೇವಾ ಕೇಂದ್ರಕ್ಕೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಹಾಗೂ ಹಾಸನ ಸೇರಿದಂತೆ ಹಲವು ಜಿಲ್ಲೆಗಳಿಂದ ದಿನಕ್ಕೆ ಸರಾಸರಿ 600 ಅರ್ಜಿದಾರರು ಆಗಮಿಸುತ್ತಾರೆ. ಆದರೆ ಸಿಬ್ಬಂದಿ ಕೊರತೆ, ಸೀಮಿತ ಸ್ಥಳಾವಕಾಶ, ಆಸನ ಹಾಗೂ ಮೂಲಸೌಕರ್ಯಗಳ ಕೊರತೆಯಿಂದ ಅರ್ಜಿದಾರರು ಗಂಟೆಗಟ್ಟಲೆ ಕಾಯಬೇಕಾಗಿದೆ ಎಂದು ಅವರು ಆರೋಪಿಸಿದರು.
ದೆಹಲಿ-ಪುಣೆ ಸ್ಪೈಸ್ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು – vishwanews24
ಸುಮಾರು 2,500ರಿಂದ 2,800 ಚದರ ಅಡಿ ಪ್ರದೇಶದಲ್ಲಿರುವ ಕೇಂದ್ರದಲ್ಲಿ ದಿನಕ್ಕೆ 600 ಅರ್ಜಿಗಳ ಒತ್ತಡವಿದೆ. ವೃದ್ಧರು, ಮಕ್ಕಳು ಹಾಗೂ ಮಹಿಳೆಯರು ಕೂಡ ತೊಂದರೆ ಅನುಭವಿಸುತ್ತಿದ್ದಾರೆ. ಜೆರಾಕ್ಸ್ ಕೇಂದ್ರದಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಯೂ ಇಲ್ಲ ಎಂದು ಅವರು ದೂರಿದರು.
ಕರ್ನಾಟಕದಲ್ಲಿ ಒಂದೇ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ ಇರುವುದರಿಂದ ಹೆಚ್ಚಿನ ಹೊರೆ ಬೀಳುತ್ತಿದೆ. ಹೀಗಾಗಿ ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ ಸ್ಥಾಪಿಸಿ, ಸಿಬ್ಬಂದಿ ಹಾಗೂ ಮೂಲಸೌಕರ್ಯ ಹೆಚ್ಚಿಸಬೇಕು . ದಕ್ಷಿಣ ಕನ್ನಡ ಜಿಲ್ಲೆಯ ಸಂಸದರು ಈ ಬಗ್ಗೆ ಗಮನ ಹರಿಸಬೇಕೆಂದು ಅವರು ಒತ್ತಾಯಿಸಿದರು .
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಶುಭಾಷ್ ಚಂದ್ರ, ವಹಾಬ್, ಪ್ರಕಾಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
