ಶಹಬಾಝ್ ಪಠಾಣ್ ಹತ್ಯೆ ಪ್ರಕರಣ: ನಾಲ್ವರಿಗೆ ಜೀವಾವಧಿ ಶಿಕ್ಷೆ – vishwanews24

Featured, ರಾಜ್ಯ ನ್ಯೂಸ್

ಶಹಬಾಝ್ ಪಠಾಣ್ ಹತ್ಯೆ ಪ್ರಕರಣ: ನಾಲ್ವರಿಗೆ ಜೀವಾವಧಿ ಶಿಕ್ಷೆ

ಬೆಳಗಾವಿ : ನಗರದ ಶಿವಬಸವ ನಗರದಲ್ಲಿ ಐದು ವರ್ಷಗಳ ಹಿಂದೆ ನಡೆದ ಶಹಬಾಝ್ ಪಠಾಣ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳಿಗೆ ಬೆಳಗಾವಿಯ ಎರಡನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ನ್ಯಾಯಾಧೀಶ ಗಂಗಾಧರ ಕೆ. ತೀರ್ಪು ಪ್ರಕಟಿಸಿದ್ದಾರೆ. ಪ್ರಕರಣದಲ್ಲಿ ದೂರುದಾರರ ಪರವಾಗಿ ಸರಕಾರಿ ಅಭಿಯೋಜಕ ಆರ್.ಎ. ಗಡ್ಕರಿ ವಾದ ಮಂಡಿಸಿದರು. ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿಗಳಾದ ಲಕ್ಷ್ಮಣ ದಡ್ಡಿ, ಸವೀನ ದಡ್ಡಿ, ಬಸವರಾಜ ದಡ್ಡಿ ಹಾಗೂ ಬಸವಣ್ಣಿ ನಾಯಕರನ್ನು ನ್ಯಾಯಾಲಯ ದೋಷಿಗಳೆಂದು ಘೋಷಿಸಿದೆ. ಇದೇ ವೇಳೆ, ಇವರ ವಿರುದ್ಧ ಇಬ್ಬರ ಮೇಲಿನ ಕೊಲೆ ಯತ್ನ ಪ್ರಕರಣದ ಆರೋಪವೂ ಸಾಬೀತಾಗಿದೆ.

ಇದನ್ನೂ ಓದಿ : 

ಉಡುಪಿ ಬೆಂಕಿ ಅವಘಡ ಸ್ಥಳಕ್ಕೆ ಅಗ್ನಿಶಾಮಕ ದಳ ತಲುಪಲು ವಿಳಂಬ : ತನಿಖೆಗೆ ವಿವೇಕ್ ಜಿ. ಸುವರ್ಣ ಆಗ್ರಹ – vishwanews24

2020ರಲ್ಲಿ ನಡೆದ ಈ ಘಟನೆಯಲ್ಲಿ, ಶಹಬಾಝ್ ಪಠಾಣ್ ಸ್ನೇಹಿತನ ಜನ್ಮದಿನ ಕಾರ್ಯಕ್ರಮದಿಂದ ಮನೆಗೆ ಬೈಕಿನಲ್ಲಿ ಹಿಂದಿರುಗುತ್ತಿದ್ದ ವೇಳೆ, ಆರೋಪಿಗಳು ವಾಹನದ ಮೂಲಕ ಅವರ ಬೈಕಿಗೆ ಢಿಕ್ಕಿ ಹೊಡೆದು ದಾಳಿ ನಡೆಸಿದ್ದರು. ಪ್ರಾಣ ಉಳಿಸಿಕೊಳ್ಳಲು ಶಹಬಾಝ್ ಸಮೀಪದ ನಿವೃತ್ತ ಡಿವೈಎಸ್ಪಿಯವರ ಮನೆಗೆ ಓಡಿ ಹೋಗಿದ್ದರೂ, ಆರೋಪಿಗಳು ಅವರನ್ನು ಬೆನ್ನಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದಿದ್ದರು.

ಗಂಭೀರವಾಗಿ ಗಾಯಗೊಂಡ ಶಹಬಾಝ್ ಪಠಾಣ್ ಸ್ಥಳದಲ್ಲೇ ಸಾವನ್ನಪ್ಪಿದರು.

ತನಿಖೆ ವೇಳೆ ಪೊಲೀಸರು 30 ಮಂದಿ ಸಾಕ್ಷಿದಾರರ ಹೇಳಿಕೆಗಳು ಮತ್ತು 128ಕ್ಕೂ ಹೆಚ್ಚು ದಾಖಲೆ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯಕ್ಕೆ ಮಂಡಿಸಿದ್ದರು. ಈ ಎಲ್ಲ ಸಾಕ್ಷ್ಯಗಳನ್ನು ಪರಿಶೀಲಿಸಿದ ಬಳಿಕ ನ್ಯಾಯಾಲಯ ಆರೋಪಿಗಳ ವಿರುದ್ಧದ ಆರೋಪಗಳು ಸಾಬೀತಾಗಿವೆ ಎಂದು ತೀರ್ಮಾನಿಸಿದೆ.

ಇದನ್ನೂ ಓದಿ : 

ಉಡುಪಿ ಅಗ್ನಿ ದುರಂತ: ತಡವಾದ ಅಗ್ನಿಶಾಮಕ ಪ್ರತಿಕ್ರಿಯೆಗೆ ತನಿಖೆ ಮತ್ತು ಪೀಡಿತರಿಗೆ ತಕ್ಷಣ ಪರಿಹಾರಕ್ಕೆ SDPI ಆಗ್ರಹ – vishwanews24

ಇದಲ್ಲದೆ, ನ್ಯಾಯಾಲಯ ಆರೋಪಿಗಳಿಗೆ ಒಟ್ಟು 9.60 ಲಕ್ಷ ರೂ. ದಂಡ ವಿಧಿಸಿದ್ದು, ಅದರಲ್ಲಿ ಎಂಟು ಲಕ್ಷ ರೂ.ವನ್ನು ಮೃತ ಶಹಬಾಝ್ ಪಠಾಣ್ ಅವರ ಕುಟುಂಬಕ್ಕೆ ಪರಿಹಾರವಾಗಿ ನೀಡಲು ಹಾಗೂ 1.60 ಲಕ್ಷ ರೂ.ವನ್ನು ದೂರುದಾರರಿಗೆ ನೀಡಲು ಆದೇಶಿಸಿದೆ.

Leave a Reply