ಕುಂದಾಪುರ : ಕಿರಣ್ ಕುಮಾರ್ ಕೊಡ್ಗಿ ಅವರನ್ನು ಗೆಲ್ಲಿಸಿಕೊಡಿ : ಹಾಲಾಡಿ ಶ್ರೀನಿವಾಸ ಶೆಟ್ಟಿ – Vishwanews24
ಕುಂದಾಪುರ : ಕಿರಣ್ ಕುಮಾರ್ ಕೊಡ್ಗಿ ಅವರನ್ನು ಗೆಲ್ಲಿಸಿಕೊಡಿ : ಹಾಲಾಡಿ ಶ್ರೀನಿವಾಸ ಶೆಟ್ಟಿ
ಕುಂದಾಪುರ: ರಾಜಕಾರಣ ಕೇವಲ ಚುನಾವಣೆಗೆ ಮಾತ್ರ ಸೀಮಿತ. ಜನಪ್ರತಿನಿಧಿಗಳಾಗಿ ಆಯ್ಕೆಯಾದ ಬಳಿಕ ಕ್ಷೇತ್ರದ ಸಮಗ್ರ ಅಭಿವೃದ್ಧಿ ಅವರ ಗುರಿಯಾಗಿರಬೇಕು ಎನ್ನುವ ತತ್ವದಲ್ಲಿ ದೃಢವಾದ ನಂಬಿಕೆ ಇಟ್ಟುಕೊಂಡಿರುವ ನಾನು, ನನ್ನ ಶಾಸಕತ್ವದ ಅವಧಿಯಲ್ಲಿ ಸ್ವಜನ ಪಕ್ಷಪಾತ, ಕ್ಷುಲ್ಲಕ ರಾಜಕೀಯ ಮಾಡದೇ ರಾಜನೀತಿ, ರಾಜಧರ್ಮ ಪಾಲಿಸಿದ್ದೇನೆ ಎನ್ನುವ ತೃಪ್ತಿ ಇದೆ. ದ್ವೇಷ ರಾಜಕಾರಣ, ಕೋಮು ಭಾವನೆಯ ವಿಷ ಬೀಜ ಬಿತ್ತುವ ಮನಸ್ಥಿತಿ, ಅನಗತ್ಯ ಅಪಪ್ರಚಾರಗಳಿಂದ ಅಂತರ ಪಾಲಿಸಿಕೊಂಡು ಬಂದಿದ್ದೇನೆ. ಅಧಿಕಾರ ರಾಜತ್ವದ ಕೊಡುಗೆ ಅಲ್ಲ, ಜನಸೇವೆ ಮಾಡಲು ದೊರಕಿದ ಅಮೃತ ಘಳಿಗೆ ಎನ್ನುವ ಸಿದ್ಧಾಂತಗಳಲ್ಲಿ ನಂಬಿಕೆಯನ್ನು ಇರಿಸಿ ಅದರಂತೆ ನಡೆದು ಬಂದಿದ್ದೇನೆ. ಇದರ ಮುಂದುವರಿಕೆಗಾಗಿ ಕಿರಣ್ ಕುಮಾರ್ ಕೊಡ್ಗಿ ಅವರನ್ನು ಗೆಲ್ಲಿಸಿಕೊಡಿ ಎಂದು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದರು.
ಅವರು ಕುಂಭಾಶಿಯಲ್ಲಿ ಕಿರಣ್ ಕುಮಾರ್ ಕೊಡ್ಗಿ ಪರ ಪ್ರಚಾರ ನಡೆಸಿ, ಕಾಂಗ್ರೆಸ್ನವರು ಮನೆ ಮನೆಗೆ ಗ್ಯಾರಂಟಿ ಕಾರ್ಡ್ ಎಂದು ಹಂಚುತ್ತಾ ಮನೆಯವರ ದಾಖಲೆಗಳನ್ನೂ ಸಂಗ್ರಹಿಸುತ್ತಾ ಬಂದಿದ್ದಾರೆ. ಗ್ಯಾರಂಟಿಯನ್ನು ನೀಡಲು ಸ್ಥಳೀಯವಾಗಿ ಕಾರ್ಡ್ ಹಂಚಿದವರು ಸಿದ್ಧರಿದ್ದಾರೆಯೇ, ಅವರು ಕೊಡುವ ಗ್ಯಾರಂಟಿ ಏನು, ಇದರಲ್ಲಿ ಸರಕಾರದ ಅಥವಾ ಅಧಿಕಾರಸ್ಥರ ಸಹಿ, ಸೀಲು ಇದೆಯೇ? ಜನರನ್ನು ಹೀಗೆ ಮೋಸ ಮಾಡಬಾರದು ಎಂದರು.
ಬಿಜೆಪಿ ಅಭ್ಯರ್ಥಿ ಕಿರಣ್ ಕುಮಾರ್ ಕೊಡ್ಗಿ, ಕುಂದಾಪುರ ಕ್ಷೇತ್ರದ ಅಭಿವೃದ್ಧಿಗೆ ಬಿಜೆಪಿ ಶಾಸಕ ಹಾಲಾಡಿಯವರ ಕೊಡುಗೆ ದೊಡ್ಡದು. 1,500ಕೋ.ರೂ.ಗಳಿಗೂ ಅಧಿಕ ಅನುದಾನ ತಂದಿದ್ದಾರೆ. ರಸ್ತೆ, ಒಳಚರಂಡಿ, ರಸ್ತೆ ಅಗಲೀಕರಣ, ಕಾಲು ಸೇತುವೆ ಸೇರಿದಂತೆ ಅನೇಕ ಯೋಜನೆಗಳನ್ನು ತಂದು ಕ್ಷೇತ್ರವನ್ನು ಸರ್ವಾಂಗೀಣ ಅಭಿವೃದ್ಧಿ ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸರಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಕ್ಷೇತ್ರದ ಜನರಿಗೆ ಸಮಾನವಾಗಿ ದೊರಕುವಂತೆ ಮಾಡಿದಲ್ಲದೇ, ಶಾಸಕರ ನಿಧಿ, ಸಂಸದರ ನಿಧಿಯಿಂದಲೂ ಕ್ಷೇತ್ರಕ್ಕೆ ಅನುದಾನ ತಂದಿದ್ದಾರೆ. ಕೇಂದ್ರ ಸರಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಿ, ಸಾರ್ವಜನಿಕರು ಅದರ ಉಪಯೋಗ ಪಡೆಯುವಂತೆ ಮಾಡಿದ್ದಾರೆ ಎಂದರು.
ಗ್ರಾಮಾಂತರ, ನಗರ ಪ್ರದೇಶ ಸೇರಿದಂತೆ ಎಲ್ಲೆಡೆ ಪ್ರಚಾರ ಕಾರ್ಯ ಮಾಡಲಾಗಿದೆ. ಬಿಜೆಪಿ ಪರವಾಗಿ ಜನ ಅಪಾರ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಚುನಾವಣ ಸಭೆಗಳಿಗೆ ಹಿಂದೆಂದಿಗಿಂತ ಈ ಬಾರಿ ಅತಿಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸಿ ಧೈರ್ಯ ತುಂಬುತ್ತಿದ್ದಾರೆ. ಇದು ಕೇಂದ್ರ ಸರಕಾರವನ್ನು ಸಮರ್ಥವಾಗಿ ಮುನ್ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಸಾರಥ್ಯದ ಲಕ್ಷಣ. ಜನ ಅದರ ಮೇಲೆ ನಂಬಿಕೆ ಇಟ್ಟಿದ್ದಾರೆ ಎಂದರು.
ಬಿಜೆಪಿ ಅಧ್ಯಕ್ಷ ಶಂಕರ ಅಂಕದಕಟ್ಟೆ, ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಶೆಟ್ಟಿ ಗೋಪಾಡಿ, ಸತೀಶ್ ಪೂಜಾರಿ ವಕ್ವಾಡಿ, ಮಾಜಿ ಅಧ್ಯಕ್ಷ ಕಾಡೂರು ಸುರೇಶ್ ಶೆಟ್ಟಿ , ಪಂಚಾಯತ್ ಅಧ್ಯಕ್ಷೆ ಶ್ವೇತಾ, ಶ್ರೀನಿಧಿ ಹೆಬ್ಟಾರ್, ಶಕ್ತಿಕೇಂದ್ರ ಅಧ್ಯಕ್ಷ ಮಂಜುನಾಥ ಕಾಮತ್, ಮಹೇಶ್ ಶೆಣೈ ಮೊದಲಾದವರು ಇದ್ದರು.
ರಾಜ್ಯ ಮತ್ತು ದೇಶದಲ್ಲಿ ಕಾಂಗ್ರೆಸ್ ಪ್ರಾಬಲ್ಯವಿದ್ದ ಕಾಲದಲ್ಲಿ ಬಿಜೆಪಿಯಿಂದ ಗೆದ್ದ ಹಾಲಾಡಿ, ಅಂದಿನ ಹಿರಿಯರೊಡನೆ ಸೇರಿಕೊಂಡು ಬಿತ್ತಿದ ಬೀಜವು ಇಂದು ಹೆಮ್ಮರವಾಗಿದೆ. ಆಡಂಬರವನ್ನು ಮೆಚ್ಚದೆ, ಬಳಿ ಬಂದವರ ಸಮಸ್ಯೆಗೆ ಪರಿಹಾರ ಕೊಡಿಸುತ್ತಾ ಕೈಲಾದ ಸಹಾಯ ಮಾಡುತ್ತಾ ಬಂದಿದ್ದಾರೆ. ಬಿಜೆಪಿ ಗೆಲುವಿಗಾಗಿ ಪಣತೊಟ್ಟು ಕ್ಷೇತ್ರದಾದ್ಯಂತ ಪ್ರಚಾರಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಕಿರಣ್ ಕುಮಾರ್ ಕೊಡ್ಗಿ ಅಭ್ಯರ್ಥಿ
ಉಡುಪಿ: ಸರ್ವ ಸಮುದಾಯಗಳ ಏಳಿಗೆಗೆ ಬಿಜೆಪಿಗೆ ಬದ್ಧ: ಯಶ್ಪಾಲ್ ಸುವರ್ಣ – Vishwanews24
