ಉಡುಪಿಯಲ್ಲಿ ಗೆಲುವಿನ ಪತಾಕೆ ಹಾರಿಸಲು ಬಿಜೆಪಿ ಯತ್ನ
ಉಡುಪಿ: ಜಿಲ್ಲೆಯಲ್ಲಿ ಕಾಂಗ್ರೆಸ್ ಭದ್ರಕೋಟೆ ಒಡೆದು ಕಮಲ ಅರಳಿದ್ದು ಇತಿಹಾಸ. ಆ ಕೋಟೆಯನ್ನು 2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭೇದಿಸಿತ್ತು. ಹಾಗಾಗಿ ಈ ಬಾರಿ ಎರಡೂ ಪಕ್ಷಗಳಿಗಿದು ಪ್ರತಿಷ್ಠೆ ಕ್ಷೇತ್ರ. ಐದು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಜಿಲ್ಲೆಯಲ್ಲಿ ನಾಲ್ಕು ಸ್ಥಾನ ಗೆದ್ದು 2008ರಲ್ಲಿ ಬೀಗಿದ್ದ ಬಿಜೆಪಿ 2013ರಲ್ಲಿ 1 ಸ್ಥಾನಕ್ಕೆ ಸೀಮಿತವಾಗಿತ್ತು. ಮೂರು ಕಾಂಗ್ರೆಸ್ ಪಾಲಾಗಿದ್ದರೆ, ಬಿಜೆಪಿಯಿಂದ ಮುನಿಸಿಕೊಂಡು ಪಕ್ಷೇತರರಾಗಿ ಸ್ಪರ್ಧಿಸಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಸುಲಭದ ತುತ್ತಾಗಿತ್ತು. ಈ ಬಾರಿ ಹಾಲಾಡಿ ಬಿಜೆಪಿ ತೆಕ್ಕೆಗೆ ಮರಳಿರುವುದರಿಂದ ಕೇಸರಿ ಪಕ್ಷಕ್ಕೆ ಶಕ್ತಿ ಬಂದಿದೆ. ಐದೂ ಕ್ಷೇತ್ರಗಳಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ನೇರ ಸ್ಪರ್ಧೆ ಇದೆ. ಎರಡೂ ಪಕ್ಷಗಳು ಜಿದ್ದಿಗೆ ಬಿದ್ದು ಪ್ರಚಾರ ನಡೆಸುತ್ತಿವೆ. ಮೇಲ್ನೋಟಕ್ಕೆ ಎರಡೂ ಪಕ್ಷಗಳಿಗೆ ತಲಾ 2 ಕ್ಷೇತ್ರಗಳಲ್ಲಿ ಗೆಲುವು ಸುಲಭ ಇದ್ದಂತಿದೆ. ಜೆಡಿಎಸ್, ಜೆಡಿಯು, ಸಿಪಿಎಂ ಪಕ್ಷಗಳ ಅಭ್ಯರ್ಥಿಗಳು ಅಸ್ತಿತ್ವ ಉಳಿಸಿಕೊಂಡರೆ ಅದೇ ದೊಡ್ಡ ಸಾಧನೆ. ಪಕ್ಷೇತರರದ್ದು ಲೆಕ್ಕಕ್ಕುಂಟು, ಆಟಕ್ಕಿಲ್ಲ ಎಂಬ ಸ್ಥಿತಿ. ಇನ್ನು ಅಭ್ಯರ್ಥಿ ಆಯ್ಕೆ ಕುರಿತು ಕೆಲವು ಕ್ಷೇತ್ರಗಳಲ್ಲಿ ಅಸಮಾಧಾನ ಇದ್ದೇ ಇದೆ. ವರಿಷ್ಠರು ತೇಪೆ ಹಚ್ಚುವ ಪ್ರಯತ್ನ ನಡೆಸಿದ್ದಾರಾದರೂ ಕೆಲವರು ಟಿಕೆಟ್ ವಂಚಿತರಾದ ಬೇಸರದಿಂದ ಹೊರಬಂದಂತಿಲ್ಲ. ಅಧಿಕೃತ ಅಭ್ಯರ್ಥಿ ಮೇಲೆ ಇದರ ಪರಿಣಾಮ ಬಿದ್ದರೂ ಅಚ್ಚರಿ ಇಲ್ಲ. ಜಿಲ್ಲೆಯಲ್ಲಿ ಮರಳುಗಾರಿಕೆ, ಮೀನುಗಾರಿಕೆ, ಕುಡಿಯುವ ನೀರಿನ ಸಮಸ್ಯೆ ಪ್ರಮುಖ ಸವಾಲುಗಳು. ಈ ಸಂಬಂಧ ಜನಪ್ರತಿನಿಧಿಗಳಿಂದ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಎಂಬ ಅಸಮಾಧಾನ ಇದ್ದೇ ಇದೆ. ಪ್ರವಾಸೋದ್ಯಮ ಅಭಿವೃದ್ಧಿ, ಕೃಷಿ ಆಧರಿತ ಕೈಗಾರಿಕೆ, ಉದ್ಯೋಗ ಸೃಷ್ಟಿಯಲ್ಲೂ ಜಿಲ್ಲೆ ಹಿಂದುಳಿದಿದೆ.
ಉಡುಪಿ ಕ್ಷೇತ್ರದಲ್ಲಿ ಶಾಲಾ-ಕಾಲೇಜು ದಿನಗಳ ಸಹಪಾಠಿಗಳಾದ ಕಾಂಗ್ರೆಸ್ನ ಪ್ರಮೋದ್ ಮಧ್ವರಾಜ್-ಬಿಜೆಪಿಯ ರಘುಪತಿ ಭಟ್ ನಡುವೆ ನೇರ ಸ್ಪರ್ಧೆ ಇದೆ. ರಘುಪತಿ ಭಟ್ ಎರಡು ಬಾರಿ ಆಯ್ಕೆಯಾದವರು. ಪ್ರಮೋದ್ ಮೊದಲ ಬಾರಿ ಶಾಸಕನಾಗಿ ಸಚಿವ ಸ್ಥಾನವನ್ನೂ ಅಲಂಕರಿಸಿ ರಾಜಕೀಯ ಕ್ಷೇತ್ರದಲ್ಲಿ ಪ್ರಭಾವಿಯಾಗಿ ಬೆಳೆದಿದ್ದಾರೆ. ಬಿಜೆಪಿಗೆ ಪಕ್ಷಾಂತರವಾಗುತ್ತಾರೆ ಎಂಬುದು ಟಿಕೆಟ್ ಘೊಷಣೆವರೆಗೂ ಕುತೂಹಲ ಉಂಟು ಮಾಡಿತ್ತಾದರೂ, ಅಂತಿಮವಾಗಿ ಸುಳ್ಳಾಗಿತ್ತು. ಇದು ಪಕ್ಷದಲ್ಲಿ ಅವರ ವರ್ಚಸ್ಸಿಗೆ ಯಾವುದೇ ರೀತಿ ಹಾನಿ ಮಾಡಿದಂತಿಲ್ಲ. ಅತ್ತ ಬಿಜೆಪಿಯ ರಘುಪತಿ ಭಟ್ ಕೂಡ ಉತ್ಸಾಹಿ ರಾಜಕಾರಣಿ, ಕ್ಷೇತ್ರದಲ್ಲಿ ಹೆಸರು ಮಾಡಿದವರು. ಮೋದಿ ಸಮಾವೇಶ ಬಳಿಕ ಹುಮ್ಮಸ್ಸು ಹೆಚ್ಚಿಸಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಗಂಗಾಧರ್ ಭಿರ್ತಿ ಕಣದಲ್ಲಿದ್ದಾರೆ.
