ನಾವು ಸ್ವಾವಲಂಬಿ ಭಾರತೀಯರಾಗಬೇಕು, ಎಲ್ಲರೂ ಸರಕಾರದಿಂದ ಅನುದಾನ ಪಡೆದರೆ ದೇಶಕ್ಕೆ ಹೊರೆ ಜಾಸ್ತಿ’ : ಅದಮಾರು ಶ್ರೀ -Vishwanews24
ನಾವು ಸ್ವಾವಲಂಬಿ ಭಾರತೀಯರಾಗಬೇಕು, ಎಲ್ಲರೂ ಸರಕಾರದಿಂದ ಅನುದಾನ ಪಡೆದರೆ ದೇಶಕ್ಕೆ ಹೊರೆ ಜಾಸ್ತಿ’ : ಅದಮಾರು ಶ್ರೀ -Vishwanews24
ಉಡುಪಿ: ಶ್ರೀಕೃಷ್ಣ ಮಠಕ್ಕೆ ಕೋವಿಡ್ ಕಾರಣದಿಂದ ಭಕ್ತರ ನಿರ್ಬಂಧವಿರುವುದರಿಂದ ಆದಾಯಕ್ಕೂ ಧಕ್ಕೆಯಾಗಿದೆ.
ಹೀಗಾಗಿ ಬ್ಯಾಂಕ್ಗಳಿಂದ 1 ಕೋ.ರೂ. ಸಾಲ ಪಡೆಯಲು ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ನಿರ್ಧರಿಸಿರುವುದು ಸುದ್ದಿಯಾಗಿರುವಂತೆ ಹಲವರಿಂದ ಹಲವು ರೀತಿಯ ಪ್ರತಿಕ್ರಿಯೆ ಗಳು ಬರುತ್ತಿವೆ.
ಸ್ವಾಮೀಜಿ ಅವರನ್ನು “ಸರಕಾರದಿಂದ ಅನುದಾನ ಕೇಳುತ್ತೀರಾ?’ ಎಂದು ಪ್ರಶ್ನಿಸಿದಾಗ “ಕೋವಿಡ್ ಅವಧಿಯಲ್ಲಿ ನಾವೇ ಸರಕಾರಕ್ಕೆ ದೇಣಿಗೆ ಕೊಟ್ಟಿದ್ದೇವೆ. ನಾವು ಸ್ವಾವಲಂಬಿ ಭಾರತೀಯರಾಗಬೇಕು. ನಮಗೂ ಕರ್ತವ್ಯಗಳಿರುತ್ತವೆ. ಎಲ್ಲರೂ ಸರಕಾರದಿಂದ ಕೇಳುತ್ತ ಹೋದರೆ ಜನಸಾಮಾನ್ಯರ ಮೇಲಿನ ಹೊರೆ ಜಾಸ್ತಿಯಾ ಗುತ್ತದೆ. ಸರಕಾರವಾದರೂ ಎಷ್ಟು ಜನರಿಗೆ ಎಷ್ಟು ಹಣ ಕೊಡಲು ಸಾಧ್ಯ?’ ಎಂದು ಉತ್ತರಿಸಿದರು.
ಶಿಕ್ಷಣ ಸಂಸ್ಥೆ ಆದಾಯ ಮೂಲವಲ್ಲ ಕೆಲವರು ಅದಮಾರು ಮಠಕ್ಕೆ ಅನೇಕ ಶಿಕ್ಷಣ ಸಂಸ್ಥೆಗಳಿವೆ. ಸಾಲ ಮಾಡುವುದೇಕೆ? ಶಿಕ್ಷಣ ಸಂಸ್ಥೆಗಳಿಂದ ಹಣ ಪಡೆಯ ಬಹುದಲ್ಲವೆ ಎಂದು ಕೇಳುತ್ತಾರೆ. “ಭಾರತ ಸ್ವಾವಲಂಬಿಯಾಗಬೇಕು ಎಂದು ದುಡ್ಡು ಕೊಡುವ ಬದಲು ದುಡ್ಡು ಸಂಪಾದಿಸ ಬೇಕಾದ ಶಿಕ್ಷಣ ಕೊಡುವ ಸಂಸ್ಥೆಗಳನ್ನು ಶ್ರೀ ವಿಬುಧೇಶತೀರ್ಥರು ಸ್ಥಾಪಿಸಿದರು.
ಶ್ರೀ ವಿಶ್ವಪ್ರಿಯ ತೀರ್ಥರು ತಮಗೆ ಬಂದ ಕಾಣಿಕೆಗಳನ್ನುಬಡ ವಿದ್ಯಾರ್ಥಿಗಳು ಕೇಳಿದಾಗ ಶುಲ್ಕ ಪಾವತಿಗೆ ಕೊಡುತ್ತಾರೆ. ನಾವು ಶಿಕ್ಷಣ ಸಂಸ್ಥೆಗಳಿಗೆ ಕೊಡಬೇಕೆ ವಿನಾ ಅಲ್ಲಿಂದ ಪಡೆಯ ಬಾರದು. ಅದು ನಮಗೆ ಆದಾಯದ ಮೂಲವಾಗಬಾರದು. ನಾವು ಸಾಲ ಮಾಡಿದರೆ ಒಂದು ಎಚ್ಚರಿಕೆಯೂ ಇರುತ್ತದೆ. ಸಾಲ ಕೊಡುವ ಬ್ಯಾಂಕ್ನವರೂ ಸುಮ್ಮನೆ ಕೊಡುತ್ತಾರೋ? ಮಠದಲ್ಲಿ ಭೂಮಿ ಮೊದಲಾದ ಸಂಪನ್ಮೂಲವಿದೆ ಎಂದು ಅದನ್ನು ಖಾಲಿ ಮಾಡುವುದು ತರವಲ್ಲ ಎಂದು ಹೇಳಿದರು.
ಶ್ರೀ ವಿಬುಧೇಶತೀರ್ಥರು 1988-90ರ ಅವಧಿಯಲ್ಲಿ ನಮ್ಮ ಗುರುಗಳಾದ ಶ್ರೀ ವಿಶ್ವಪ್ರಿಯತೀರ್ಥರಿಂದ ಪರ್ಯಾಯ ಪೂಜೆ ಮಾಡಿಸಿದಾಗ 60 ಲ.ರೂ. ಸಾಲ ಮಾಡಿದ್ದರು. ಪರ್ಯಾಯ ಪೀಠದಿಂದ ನಿರ್ಗಮಿಸುವಾಗ 25 ಲ.ರೂ. ಸಾಲ ಉಳಿದಿತ್ತು. ಅದನ್ನು ಶ್ರೀ ವಿಬುಧೇಶತೀರ್ಥರೇ ತೀರಿಸಿದರು. ಶ್ರೀಕೃಷ್ಣ ಮಠದಲ್ಲಿ ಪ್ರಸ್ತುತ ನಿತ್ಯ 1ರಿಂದ 1.25 ಲ.ರೂ. ಖರ್ಚು ಬರುತ್ತದೆ.
– ಶ್ರೀ ಈಶಪ್ರಿಯತೀರ್ಥ ಶ್ರೀಪಾದರು
